Sullia : ಆಧುನಿಕ ಯುಗದಲ್ಲಿ ಕ್ಷಣಮಾತ್ರದಲ್ಲಿ ದೂರದರ್ಶನ, ಇಂಟರ್ನೆಟ್ ಮೂಲಕ ಮಾಹಿತಿಯನ್ನು ತಿಳಿಯುತ್ತೇವೆ. ಆದರೆ ಪತ್ರಿಕೆಗಳ ಓದಿನ ಲಾಭವೇ ಬೇರೆ. ಅದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಈಗ ಶಾಲೆಗಳು ಅಂಕಗಳಿಕೆಗೆ ಮಾತ್ರ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿವೆ. ಆದರೆ ಸ್ನೇಹಶಾಲೆ ಎಲ್ಲಾ ಶಾಲೆಗಳಿಗಿಂತ ವಿಭಿನ್ನ. ಇಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಜ್ಞಾನ, ಸಾಹಿತ್ಯದ ಅಭಿರುಚಿಯ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಲವು ಮೂಡಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುತ್ತಿದೆ ಎಂದು ಅಮರಸುಳ್ಯ ಸುದ್ದಿ ಪತ್ರಿಕೆಯ ಸಂಪಾದಕರಾದ ಶ್ರೀ ಜಯಪ್ರಕಾಶ್ ಕುಕ್ಕೇಟಿ ಹೇಳಿದರು.
ಅವರು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಜು 1 ರಂದು ಪತ್ರಿಕಾ ದಿನಾಚರಣೆ ಅಂಗವಾಗಿ ಸಂಸ್ಥೆಯ ಸ್ನೇಹಶಿಲಾ, ಮಾಸಿಕ ಪತ್ರಿಕೆಯ 6ನೇ ಸಂಪುಟವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಡಾ| ಚಂದ್ರಶೇಖರ ದಾಮ್ಲೆಯವರು ಮಾತನಾಡಿ, ’ಸ್ನೇಹಶೀಲಾ’ ಪತ್ರಿಕೆ ಶಾಲೆ ಹಾಗೂ ಮನೆಯ ನಡುವಿನ ಸಂಪರ್ಕಸೇತು, ಇದು ವಿದ್ಯಾರ್ಥಿಗಳ ಸೃಜನಶೀಲತೆಗೆ ಕೈಗನ್ನಡಿ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ದಿನ ಸಂಸ್ಥೆಯ ಅಧ್ಯಕ್ಷರ ಹುಟ್ಟುಹಬ್ಬವಾದ ಕಾರಣ ಎಲ್ಲಾ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಲೇಖನಿ ನೀಡಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕಾರ್ಯಕ್ರಮದ ಮೊದಲಿಗೆ ಶ್ರದ್ಧಾ ಡಿ ಕೆ, ಅನಘಾ ಆರ್ ಯು, ತೇಜಸ್ವಿನಿ ಕೆ ಪ್ರಾರ್ಥಿಸಿದರು. ಸುಮಾ ವೈ ಭಟ್ ಸ್ವಾತಿಗತಿಸಿ, ವೈಶಾಖ್ ಎಂ ಎಸ್ ವಂದಿಸಿದರು. ವಿಶ್ವಾಸ್ ಡಿ ಕಾರ್ಯಕ್ರಮ ನಿರೂಪಿಸಿದರು.