ಬೆಳಗಾವಿ : ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾಗಿರುವ ಬಾಕಿ ಹಣ ನೀಡಲು ಸರ್ಕಾರದ ಖಜಾನೆಯೇನು ಅಕ್ಷಯ ಪಾತ್ರೆಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿ ಸಾರ್ವಜನಿಕ ಮಹತ್ವದ ವಿಷಯದ ಮೇಲೆ ರೈತರ ಆತ್ಮಹತ್ಯೆ ಪ್ರಕರಣದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ರೈತರ ಬಾಕಿ ಹಣ ಪಾವತಿಸಲು 3000 ಕೋಟಿ ರೂ ಎಲ್ಲಿಂದ ತರಬೇಕು? ಯಾವ ಬಾಬ್ತಿನಲ್ಲಿ ನೀಡಬೇಕು ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ 2013-14ನೇ ಸಾಲಿನ ಕಬ್ಬಿನ ಬಾಕಿ ಹಣ ಕೊಡಿಸಲು ಸಿದ್ಧವಾಗಿದೆ. ಆದರೆ, 2014-15ನೇ ಸಾಲಿನ ಬಾಕಿ ಹಣ ಅಲ್ಲ. ಕಬ್ಬಿಗೆ ಎಫ್.ಆರ್.ಪಿ ನಿಗದಿ ಮಾಡಿರುವುದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರ ನಿಗದಿ ಮಾಡಿದರೆ ರಾಜ್ಯ ಸರ್ಕಾರಗಳು ಹಣ ನೀಡಲು ಸಾಧ್ಯವಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರ ರಾಜ್ಯಗಳ ಸಹಾಯಕ್ಕೆ ಬರಬೇಕು ಎಂದು ಹೇಳಿದರು.
ಪ್ರತಿ ಟನ್ ಕಬ್ಬಿಗೆ 2200 ರೂ ನಿಗದಿ ಪಡಿಸಲಾಗಿದೆ. ಸರಾಸರಿ 1800 ರೂ ವರೆಗೂ ಕಾರ್ಖಾನೆಗಳು ಹಣ ಪಾವತಿಸಿವೆ. ಪ್ರತಿ ಟನ್ ಗೆ 400 ರೂ ನಂತೆ 2120 ಕೋಟಿ ರೂ ಬಾಕಿ ಇದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರೈತರ ನೆರವಿಗೆ ಧಾವಿಸುವಂತೆ ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದರು.
ರಾಜ್ಯ ಸರ್ಕಾರ 31 ಲಕ್ಷ ಟನ್ ಸಕ್ಕರೆ ಜಪ್ತಿ ಮಾಡಿದ್ದು, 6000 ಕೋಟಿ ರೂ ಆಗುವ ನಿರೀಕ್ಷೆ ಇದೆ. ಈ ಸಕ್ಕರೆ ಮಾರಾಟ ಮಾಡಿ ರೈತರ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು. 2013-14ನೇ ಸಾಲಿನ ಪ್ರತಿಟನ್ಗೆ 200 ರೂ ನಂತೆ 923 ಕೋಟಿ ರೂ ಬಾಕಿ ಉಳಿದಿರುವುದನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.