ಡೆಹ್ರಾಡೂನ್ : 2013ರ ಜಲಪ್ರಳಯದ ಕರಾಳ ನೆನಪು ಮಾಸುವ ಮುನ್ನವೇ ಉತ್ತರಾಖಂಡಲ್ಲಿ ಮತ್ತೆ ಪ್ರವಾಹ ಮರುಕಳಿಸಿದೆ. 300ಕ್ಕೂ ಹೆಚ್ಚು ಕನ್ನಡಿಗರು ಉತ್ತರಾಖಂಡದ ಪ್ರವಾಹ ಮತ್ತು ಭೂಕುಸಿತದಲ್ಲಿ ಸಿಲುಕಿದ್ದು, ಈ ಪೈಕಿ ಸುಮಾರು 200 ಯಾತ್ರಿಗಳ ಸ್ಥಿತಿ ಅತಂತ್ರವಾಗಿದೆ.
ಬೆಂಗಳೂರು, ತುಮಕೂರು, ಪಾವಗಡ, ಗೌರಿಬಿದನೂರು, ಮೈಸೂರು, ಬಳ್ಳಾರಿ ಸೇರಿದಂತೆ ವಿವಿಧೆಡೆಯಿಂದ ಬದರಿನಾಥ, ಕೇದಾರನಾಥ ಸೇರಿದಂತೆ ಉತ್ತರಾಖಂಡದ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿದ್ದ ಕನ್ನಡಿಗರು ಅಲ್ಲಿ ಉಂಟಾದ ಪ್ರವಾಹ ಹಾಗೂ ಭೂಕುಸಿತದ ಪರಿಣಾಮ ದಾರಿಮಧ್ಯೆ ಸಿಲುಕಿದ್ದಾರೆ.
ಬದರಿನಾಥದ ಸತ್ಯಬಾಬಾ ಅನ್ನಕ್ಷೇತ್ರ ಸಮೀಪದ ದೀಪಕ್ ಲಾಡ್ಜ್ ಬಳಿ 130 ಕನ್ನಡಿಗರು ಕಳೆದ ಐದು ದಿನಗಳಿಂದ ಸರ್ಕಾರದ ಸಹಾಯಹಸ್ತಕ್ಕಾಗಿ ಕಾದು ಕುಳಿತಿದ್ದಾರೆ. 5ರಿಂದ 10 ಜನ ಮಹಿಳೆಯರು, ಐದಾರು ಮಕ್ಕಳು, ವೃದ್ಧರು ಕೂಡ ಈ ಗುಂಪಿನಲ್ಲಿದ್ದಾರೆ. ಆದರೆ, ಇದುವರೆಗೆ ನಮಗೆ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ ಎಂದು ಈ ಯಾತ್ರಿಗಳು ಗೋಳು ತೋಡಿಕೊಳ್ಳುತ್ತಿದ್ದಾರೆ.
ಅಲ್ಲದೆ, ಹರಿದ್ವಾರದ ಜೋಶಿಮಠದಲ್ಲೂ 53 ಕನ್ನಡಿಗರು ಸಿಲುಕಿದ್ದಾರೆ. ಇವರೆಲ್ಲ ತುಮಕೂರು, ಶಿರಾ ಮತ್ತಿತರ ಕಡೆಗಳಿಂದ ತೆರಳಿದ್ದರು ಎನ್ನಲಾಗಿದೆ. ಈ ಯಾತ್ರಾರ್ಥಿಗಳು ಶೀಘ್ರ ದೆಹಲಿಗೆ ಬಂದು ಸೇರಲಿದ್ದಾರೆ. ಈ ಮಧ್ಯೆ ಶನಿವಾರ 29 ಕನ್ನಡಿಗರು ದೆಹಲಿಯ ಕರ್ನಾಟಕ ಭವನಕ್ಕೆ ಬಂದಿಳಿದಿದ್ದಾರೆ ಎಂದು ಭವನದ ಜಂಟಿ ನಿವಾಸಿ ಆಯುಕ್ತ ರಂಗಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಉತ್ತರಾಖಂಡದ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಕೇಂದ್ರವು ದಿನದ 24 ಗಂಟೆಗಳ ಸಹಾಯವಾಣಿ ಕೇಂದ್ರವನ್ನೂ ತೆರೆದಿದ್ದು, ಅಲ್ಲಿ ಸಿಲುಕಿರಬಹುದಾದ ಕನ್ನಡಿಗರ ರಕ್ಷಣೆಗೆ ಮುಂದಾಗಿದೆ. ಆದರೆ, ಇದುವರೆಗೂ ಕೇಂದ್ರಕ್ಕೆ ಯಾವುದೇ ಕರೆಗಳು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, ಮಳೆಯಿಂದ ತತ್ತರಿಸಿರುವ ಉತ್ತರಾಖಂಡದಿಂದ ದೆಹಲಿಗೆ ಆಗಮಿಸುವ ಕನ್ನಡಿಗರಿಗೆ ಕರ್ನಾಟಕ ಭವನದಲ್ಲಿ ನೆರವು ನೀಡಲಾಗುವುದು ಎಂದು ನಿವಾಸಿ ಆಯುಕ್ತರಾದ ವಂದನಾ ಗುರ್ನಾನಿ ತಿಳಿಸಿದ್ದಾರೆ.
ಉತ್ತರಾಖಂಡ ರಾಜ್ಯದ ಕಾರ್ಯದರ್ಶಿ ಮಟ್ಟದ ಐಎಎಸ್ ಅಧಿಕಾರಿ ಶ್ರೀಧರಬಾಬು ಅವರೊಂದಿಗೆ ಅಲ್ಲಿನ ಸ್ಥಿತಿಗತಿ ಕುರಿತು ಚರ್ಚಿಸಲಾಗಿದೆ. ಮಳೆಯಿಂದಾಗಿ ನೂರು ಮೀಟರ್ ಉದ್ದದ ರಸ್ತೆ ಕುಸಿದಿದ್ದು, ಅದನ್ನು ಸರಿಪಡಿಸಲಾಗುತ್ತಿದೆ. ದುರಸ್ತಿ ಕಾರ್ಯ ಪೂರ್ಣಗೊಂಡ ಕೂಡಲೇ ನೇರವಾಗಿ ದೆಹಲಿ ಮಾರ್ಗ ಸಂಚಾರ ಸುಗಮವಾಗುತ್ತದೆ. ತುರ್ತು ಚಿಕಿತ್ಸೆ ನೀಡಬೇಕಾದವರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲು ಅಲ್ಲಿನ ಸರ್ಕಾರ ಕ್ರಮ ಕೈಗೊಂಡಿದೆ ಶ್ರೀಧರ ಬಾಬು ತಿಳಿಸಿದ್ದಾರೆ.