ಮಂಡ್ಯ : ಲೋಕಾಯುಕ್ತ ಸಂಸ್ಥೆಯ ಮೇಲೆ ಲಂಚ ಪಡೆದಿರುವ ಆರೋಪ ಬಂದಿರುವ ಬಗ್ಗೆ ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಕಿಡಿಕಾರಿದ್ದು, ಇಷ್ಟೆಲ್ಲಾ ನಾಟಕದ ಬದಲು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚುವುದು ಒಳಿತು ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಂಚ ಪಡೆದ ಆರೋಪದ ತನಿಖೆಯನ್ನು ಸಿಸಿಬಿ ಗೆ ವಹಿಸಿರುವ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ತನಿಖೆ ನಡೆಸುತ್ತಿರುವ ಸಿಸಿಬಿ ಜಂಟಿ ಆಯುಕ್ತ (ಅಪರಾಧ) ಚಂದ್ರಶೇಖರ್ ಅವರ ಮಾವನ ವಿರುದ್ದ ಭೃಷ್ಟಾಚಾರ ಆರೋಪವಿದ್ದು ಇನ್ನೂ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ ಎಂದರು. ಪ್ರಕರಣವನ್ನು ಸಿಬಿಐ ಮೂಲಕ ನಡೆಸಿದರೆ ಉತ್ತಮವಿತ್ತು ಎಂದು ಸಲಹೆ ನೀಡಿದರು.
ಲೋಕಾಯುಕ್ತ ಕಚೇರಿ ಆವರಣದಲ್ಲಿ ಎಂಜಿನಿಯರ್ ವೊಬ್ಬರಿಗೆ ಹಾಗೂ ಲೋಕಾಯುಕ್ತರ ನಿವಾಸದಲ್ಲಿ ಅಧಿಕಾರಿಯೊಬ್ಬರಿಗೆ ತಲಾ ಒಂದು ಕೋಟಿ ರೂ. ಲಂಚ ನೀಡುವಂತೆ ಬ್ಲ್ಯಾಕ್ಮೆಲ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಸುದ್ದಿಗೋಷ್ಠಿ ನಡೆಸಿ ಆರೋಪಗಳನ್ನು ತಳ್ಳಿಹಾಕಿ ಪ್ರಕರಣವನ್ನು ಸಿಸಿಬಿಗೆ ವಹಿಸಿ, ಈ ಬಗ್ಗೆ ಸಿಸಿಬಿ ಜಂಟಿ ಆಯುಕ್ತ (ಅಪರಾಧ) ಚಂದ್ರಶೇಖರ್ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಲೋಕಾಯುಕ್ತರ ಈ ಕ್ರಮಕ್ಕೆ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿ ಅವರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.