ಕೋಲ್ಕತ್ತಾ : ಪಶ್ಚಿಮಬಂಗಾಳ ಸರ್ಕಾರದ ಆಡಳಿತವನ್ನು ಯಾರಾದರು ಪ್ರಶ್ನಿಸಿದರೆ ಅಂತಹವರ ಕಣ್ಣನ್ನು ಕಿತ್ತುಹಾಕುವುದಲ್ಲದೇ, ಕೈಗಳನ್ನು ಕತ್ತರಿಸಿ ಹಾಕುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಿರುವ ಅಭಿಷೇಕ್, ದೇಶದ ಬಹುತೇಕ ರಾಜಕೀಯ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರ ಪಾದಕ್ಕೆ ಶರಣಾಗಿವೆ. ಆದರೆ ತೃಣಮೂಲ ಕಾಂಗ್ರೆಸ್ ಹಾಗೆ ಶರಣಾಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದ ಹೃದಯಭಾಗವಾಗಿರುವ ದೆಹಲಿ ಮತ್ತು ಸಂಸತ್ ನಲ್ಲಿ ವಿವಿಧ ರೀತಿಯ ಪ್ರತಿಭಟನೆಗಳು ನಡೆಯುತ್ತಿವೆ. ಬಂಗಾಳದ ಜನರ ಹಿತಾಸಕ್ತಿಗೆ ನೋವು ಮಾಡಿದರೆ ಅದನ್ನು ಮಮತಾ ಬ್ಯಾನರ್ಜಿ ಆಗಲಿ, ತೃಣಮೂಲ ಕಾಂಗ್ರೆಸ್ ಪಕ್ಷ ಸಹಿಸಿಕೊಳ್ಳೊದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ನಾವು ಅಂತಹ ವಿಚಾರಗಳನ್ನು ಬಿಟ್ಟು ಬಿಡುವುದಿಲ್ಲ. ಎಲ್ಲಿಯವರೆಗೆ ಮಮತಾ ಬ್ಯಾನರ್ಜಿ ಆಡಳಿತ ನಡೆಸುತ್ತಾರೋ ಅಲ್ಲಿಯವರೆಗೆ ಯಾರಾದರು ಪಶ್ಚಿಮ ಬಂಗಾಳದ ಮೇಲೆ ಕೆಟ್ಟ ದೃಷ್ಟಿ ಬೀರಿದರೆ ನಾವು ಅಂತಹವರ ಕಣ್ಣು ಕಿತ್ತು ರಸ್ತೆ ಮೇಲೆ ಎಸೆಯುತ್ತೇವೆ, ಒಂದು ವೇಳೆ ನಮ್ಮ ಮೇಲೆ ಕೈ ಎತ್ತಿದರೆ ಅವರ ಕೈಗಳನ್ನು ಕತ್ತರಿಸಿ ಹಾಕುತ್ತೇವೆ ಎಂದು ಕಿಡಿಕಾರಿದ್ದಾರೆ.