ನವದೆಹಲಿ : ಭಾರತದಲ್ಲಿನ ಇಸ್ರೇಲ್ ದೂತಾವಾಸ ಕಚೇರಿಗಳು ಮತ್ತು ಭಾರತ ಪ್ರವಾಸದಲ್ಲಿರುವ ಇಸ್ರೇಲಿ ಪ್ರವಾಸಿಗರ ಮೇಲೆ ಲಷ್ಕರ್ ಎ ತೊಯ್ಬಾ ಉಗ್ರರ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ದೆಹಲಿ, ಕರ್ನಾಟಕ ಸೇರಿದಂತೆ ಇಸ್ರೇಲ್ ಸರ್ಕಾರದ ಸಂಸ್ಥೆಗಳು ಇರುವ ರಾಜ್ಯಗಳ ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ಬೆಂಗಳೂರಿನ ಯಶವಂತಪುರದ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲೂ ಇಸ್ರೇಲ್ ದೂತಾವಾಸವಿದ್ದು, ಕರ್ನಾಟಕಕ್ಕೆ ಗೃಹ ಸಚಿವಾಲಯ ಈ ಕುರಿತ ಸೂಚನೆ ರವಾನಿಸಿರುವುದು ಮಹತ್ವ ಪಡೆದಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಇಸ್ರೇಲ್ ನ ರಾಯಭಾರಿ ಕಚೇರಿ ಸೇರಿದಂತೆ ಇತರೆಡೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ವರ್ಷಾಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ದಾಳಿ ನಡೆಯಬಹುದೆನ್ನಲಾಗಿದೆ.