ನವದೆಹಲಿ : ನಿಮ್ಮ ಧರ್ಮ ಯೋಗದಿಂದ ಬೆದರಿಸಲ್ಪಡುವಷ್ಟು ದುರ್ಬಲವಾಗಿದ್ದರೆ ನೀವು ಆ ಧರ್ಮವನ್ನು ಬಿಟ್ಟು ಬಿಡಿ ಎಂದು ಯೋಗ ಗುರು ಬಾಬಾ ರಾಮ್ ದೇವ್ ವ್ಯಂಗ್ಯವಾಡಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನದ ಮುನ್ನಾ ದಿನ ಋಷಿಕೇಷದ ಪಾರಮಾರ್ಥ ಆಶ್ರಮದಲ್ಲಿ ಮಾತನಾಡಿದ ರಾಮ್ ದೇವ್, ಯೋಗವನ್ನು ಧರ್ಮದೊಂದಿಗೆ ತಳುಕುಹಾಕುವುದನ್ನು ತೀವ್ರವಾಗಿ ವಿರೋಧಿಸಿದರು. ಶಾಲೆಗಳಲ್ಲಿ ಸೂರ್ಯ ನಮಸ್ಕಾರ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಅವರು ಖಂಡಿಸಿದರು.
ಈ ವೇಳೆ ಪ್ರಾಣಾಯಾಮ ಮಾಡಲು ಹೇಳಿದ ರಾಮ್ ದೇವ್ ದೀರ್ಘ ಉಸಿರು ತೆಗೆದುಕೊಳ್ಳಿ ಮತ್ತು ಬಿಡಿ. ಇದರಿಂದ ನಿಮ್ಮ ಧರ್ಮ ಬದಲಾಗುತ್ತದೆಯೇ ಎಂದು ಪ್ರಶ್ನಿಸಿದರು. ಕೇವಲ ಯೋಗ ಮಾಡುವುದರಿಂದ ಧರ್ಮ ಹಾಳಾಗುತ್ತದೆ ಇಲ್ಲವೇ ಬೆದರಿಸಲ್ಪಡುವಷ್ಟು ದುರ್ಬಲವಾಗಿದೆ ಎಂದಾದರೆ ನೀವು ಅಂಥಹ ದುರ್ಬಲ ಧರ್ಮದಿಂದ ಹೊರಬನ್ನಿ ಎಂದರು.
ನನ್ನ ಪ್ರಕಾರ ಎಲ್ಲರಲ್ಲೂ ದೇವರಿದ್ದಾನೆ, ಎಲ್ಲರೂ ದೇವರಲ್ಲಿದ್ದಾರೆ .ಮೂರು ಸತ್ಯಗಳಿವೆ. ಅವುಗಳೆಂದರೆ 'ಪರಮಾತ್ಮ', 'ಆತ್ಮ' ಮತ್ತು 'ಪ್ರಕೃತಿ'. ಪ್ರಪಂಚದಲ್ಲಿ ಎಲ್ಲಿ ಸೃಷ್ಟಿಯಿದೆಯೊ ಅಲ್ಲಿ ದೇವರಿದ್ದಾನೆ ಎಂದರು.