ನವದೆಹಲಿ : ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಘೋಷಣೆಯಾಗದು ಎಂದು ಹೇಳಲಾಗದು ಎಂಬ ತಮ್ಮ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್ ಗೆ ನೀಡಿದ ಟಾಂಗ್ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಡ್ವಾಣಿ, ನಾನು ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಈ ಮಾತು ಹೇಳಿಲ್ಲ. ತುರ್ತು ಪರಿಸ್ಥಿತಿಯ ಹೇಳಿಕೆಯು ನೇರವಾಗಿ ಕಾಂಗ್ರೆಸ್ ಅನ್ನು ಗುರಿಯಾಗಿಸಿ ಹೇಳಿದ್ದು. 4 ದಶಕಗಳ ಹಿಂದೆ ತುರ್ತು ಪರಿಸ್ಥಿತಿ ಘೋಷಿಸಿದ್ದ ಕಾಂಗ್ರೆಸ್ ಅದರ ಬಗ್ಗೆ ಸ್ವಲ್ಪವೂ ಪಶ್ಚಾತ್ತಾಪ ಪಟ್ಟಿಲ್ಲ. 1975ರ ತಮ್ಮ ನಿರ್ಧಾರಕ್ಕೆ ಕಾಂಗ್ರೆಸ್ ನ ಹಿರಿಯ ನಾಯಕರು ಕ್ಷಮೆ ಕೋರಬೇಕು ಎಂಬುವುದೇ ನನ್ನ ಮಾತಿನ ಅರ್ಥವಾಗಿತ್ತು ಎಂದಿದ್ದಾರೆ.
ಅಡ್ವಾಣಿ ನೀಡಿದ ತುರ್ತು ಪರಿಸ್ಥಿತಿ ಹೇಳಿಕೆಯನ್ನು ಎಲ್ಲರೂ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಹೇಳಿದ್ದು ಎಂದೇ ಅರ್ಥೈಸಿಕೊಂಡಿದ್ದರು. ಇದೇ ವೇಳೆ, ’ನಾನು ಎಲ್ಲ ರೀತಿಯ ಸರ್ವಾಧಿಕಾರವನ್ನೂ ವಿರೋಧಿಸುತ್ತೇನೆ. ಅಹಂಕಾರ ಸರ್ವಾಧಿಕಾರವನ್ನು ಸೃಷ್ಟಿಸುತ್ತದೆ. ನಾಯಕರೆಂದರೆ ವಾಜಪೇಯಿಯವರಂತೆ ಇರಬೇಕು’ ಎಂದೂ ಹೇಳಿರುವ ಆಡ್ವಾಣಿ, ಯಾರನ್ನು ಉದ್ದೇಶಿಸಿ ಹೇಳಿದ್ದೆಂದು ಹೇಳಲು ನಿರಾಕರಿಸಿದ್ದಾರೆ.