ಮುಂಬೈ : ವಾಣಿಜ್ಯ ನಗರಿ ಮುಂಬೈನಲ್ಲಿ ಗುರುವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ರೈಲು ನಿಲ್ದಾಣಗಳು, ತಗ್ಗುಪ್ರದೇಶಗಳು, ಜನನಿಬಿಡ ರಸ್ತೆಗಳು ಹಳ್ಳಗಳಂತಾಗಿದ್ದು, ಎಲ್ಲೆಂದರಲ್ಲಿ ನೀರು ತುಂಬಿಕೊಂಡಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಮಹಾನಗರಿಯಲ್ಲಿ 283 ಮಿ.ಮೀನಷ್ಟು ಮಳೆಯಾಗಿದೆ. ಇದು ಸಾಮಾನ್ಯವಾಗಿ ಮುಂಗಾರು ಹಂಗಾಮಿನಲ್ಲಿ 10 ದಿನಗಳಲ್ಲಿ ಸುರಿಯುವ ಮಳೆಗೆ ಸಮನಾಗಿದೆ. ಮಳೆ ಸಂಬಂಧಿ ಘಟನೆಗೆ ನಗರದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈ ನಡುವೆ, ಮುಂದಿನ 48 ತಾಸುಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಜನಜೀವನಕ್ಕೆ ಮತ್ತಷ್ಟು ತೊಂದರೆಯಾಗುವ ಸಾಧ್ಯತೆ ಇದೆ.
ಜೊತೆಗೆ ಶುಕ್ರವಾರ ರಾತ್ರಿ 2 ಗಂಟೆ ಮತ್ತು ಶನಿವಾರ ಮಧ್ಯಾಹ್ನ 3.10ರ ವೇಳೆಗೆ ಸಮುದ್ರದಲ್ಲಿ 3 ಮೀಟರ್ ವರೆಗೂ ಎತ್ತರದ ಅಲೆ ಕಾಣಿಸಿಕೊಳ್ಳಲಿವೆ. ಹೀಗಾಗಿ ಸಮುದ್ರ ತೀರಕ್ಕೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನೂ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತೀರಾ ಅನಿವಾರ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರುವಂತೆ ಸ್ವತಃ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕರೆ ನೀಡಿದ್ದಾರೆ.
ಮುಂಬೈನ ವಡಾಲಾ ಪ್ರದೇಶದಲ್ಲಿ ಮಳೆಯಿಂದಾಗಿ ಧರೆಗೆ ಉರುಳಿದ್ದ ವಿದ್ಯುತ್ ತಂತಿ ತಗುಲಿ 5 ವರ್ಷದ ಬಾಲಕ ಮತ್ತು 60 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ನಗರದಲ್ಲಿ ಹರಿಯುವ ಮಿಥಿ ನದಿಯಲ್ಲಿ ಶುಕ್ರವಾರ ಏಕಾಏಕಿ ಏರಿಕೆ ಕಂಡುಬಂದಿದ್ದು, ಅದು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
200 ಕೋಟಿ ಮಣ್ಣುಪಾಲು: ಈ ನಡುವೆ, ರಸ್ತೆಗಳು, ತಗ್ಗುಪ್ರದೇಶಗಳಲ್ಲಿ ತುಂಬಿರುವ ನೀರನ್ನು ಹೊರಹಾಕಲು ಭಾರಿ ಗಾತ್ರದ 120 ಪಂಪ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಏತನ್ಮಧ್ಯೆ, 200 ಕೋಟಿ ರೂ. ವೆಚ್ಚದಲ್ಲಿ ಹೊಸ ಪಂಪ್ ಗಳನ್ನು ಅಳವಡಿಸಲಾಗಿದ್ದು, ಈ ಮಳೆಗಾಲದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಜನತೆಗೆ ಆಶ್ವಾಸನೆ ನೀಡಿತ್ತು. ಆದರೆ ಆ ಪಂಪ್ ಗಳ ವ್ಯಾಪ್ತಿ ಪ್ರದೇಶದಲ್ಲಿ ಮೊದಲ ಮಳೆಗೇ ನೀರು ತುಂಬಿಕೊಂಡಿರುವುದರಿಂದ ಜನ ಶಪಿಸುವಂತಾಗಿದೆ.
ಮುಂಬೈನಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮುಂದಿನ ನಾಲ್ಕೈದು ದಿನಗಳಲ್ಲಿ ದಕ್ಷಿಣ ಹಾಗೂ ಕೇಂದ್ರ ಭಾರತದಲ್ಲಿ ಹೆಚ್ಚು ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಮತ್ತೂಂದು ಬಿರುಗಾಳಿ ಸೃಷ್ಟಿಯಾಗಿದ್ದು, ಇದರಿಂದ ದಕ್ಷಿಣ ಹಾಗೂ ಕೇಂದ್ರ ಭಾರತದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.