ನವದೆಹಲಿ : ಸಾವಿರಾರು ಕೋಟಿ ರೂ. ಅಕ್ರಮ ಹಣಕಾಸು ವ್ಯವಹಾರ ಆರೋಪದ ಹಿನ್ನಲೆಯಲ್ಲಿ ಲಂಡನ್ ನಲ್ಲಿರಿವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ವಿರುದ್ಧ ಕ್ರಮಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮುಂದಾಗಿದೆ.
ಲಲಿತ್ ಮೋದಿ ಪಾಸ್ ಪೋರ್ಟ್ ರದ್ದತಿ ಆದೇಶವನ್ನು ರದ್ದು ಮಾಡಿದ ದೆಹಲಿ ಹೈಕೋರ್ಟ್ ಕ್ರಮವನ್ನು 1 ವರ್ಷವಾದರೂ ಏಕೆ ಎನ್.ಡಿ.ಎ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿಲ್ಲ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ. ಇದರ ಈಮಧ್ಯೆ ಲಲಿತ್ ಮೋದಿ ಪಾಸ್ ಪೋರ್ಟ್ ರದ್ದತಿ ಕೋರಿ ಸುಪ್ರೀಂ ಕೋರ್ಟ್ಗೆ ಹೋಗಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಕೆಲ ವರದಿಗಳು ಹೇಳಿವೆ.
ಇನ್ನೊಂದೆಡೆ ಲಲಿತ್ ಮೋದಿ ಮತ್ತು ಅವರ ಪತ್ನಿಗೆ ಸೇರಿದ ಆನಂದ್ ಹೆರಿಟೇಜ್ ಕಂಪನಿಯ ಹಿಂದಿನ ನಿರ್ದೇಶಕರಿಗೆ, ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಸ್ಪಷ್ಟನೆ ಕೋರಿ ನೋಟಿಸ್ ಜಾರಿ ಮಾಡಿದೆ. ಈ ಕಂಪನಿಗೆ ಮಾರಿಷಸ್ ನಿಂದ 2007ರಲ್ಲೇ ಅಕ್ರಮ ಹಣ ಬಂದಿತ್ತು. ಈ ಹಣವನ್ನು ಲಲಿತ್ ಅವರು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಪುತ್ರನ ಕಂಪನಿಯಲ್ಲಿ ತೊಡಗಿಸಿದ್ದರು ಎಂದು ಆಪಾದಿಸಲಾಗಿದ್ದು, ಈ ನಿಟ್ಟಿನಲ್ಲಿ ಇ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ತಮ್ಮ ವಿರುದ್ಧ ಹಣಕಾಸು ಅಕ್ರಮದ ಆರೋಪಗಳು ಕೇಳಿ ಬಂದಾಗ ಲಲಿತ್ ಮೋದಿ 2010ರಲ್ಲಿ ಭಾರತ ಬಿಟ್ಟು ಲಂಡನ್ ಗೆ ತೆರಳಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ 2011ರಲ್ಲಿ ಲಲಿತ್ ಮೋದಿ ಅವರ ಪಾಸ್ ಪೋರ್ಟನ್ನು ರದ್ದುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಲಲಿತ್ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಆದರೆ, 2014ರ ಆ.27ರಂದು ದೆಹಲಿ ಹೈಕೋರ್ಟ್ ಲಲಿತ್ ಪರ ತೀರ್ಪು ನೀಡಿ, ಪಾಸ್ ಪೋರ್ಟ್ ರದ್ದು ಆದೇಶವನ್ನೇ ರದ್ದುಗೊಳಿಸಿತ್ತು. ಆದರೆ 2014ರ ಮೇನಲ್ಲಿ ಅಧಿಕಾರಕ್ಕೆ ಬಂದಿದ್ದ ನರೇಂದ್ರ ಮೋದಿ ಸರ್ಕಾರ, ಈ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಈವರೆಗೂ ಪ್ರಶ್ನಿಸಿಲ್ಲ.
ಈಗ ಲಲಿತ್ ಮೋದಿ ಅವರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಕ್ರಮ ನೆರವು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಕೊನೆಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಚಿಂತನೆ ಆರಂಭಿಸಿದೆ ಎನ್ನಲಾಗಿದೆ.
ನಿಯಮಾನುಸಾರ, ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಬೇಕಿದೆ. ಆದರೆ ಇಷ್ಟು ವಿಳಂಬವಾಗಿಸುಪ್ರೀಂ ಕೋರ್ಟ್ ಮೊರೆ ಹೋಗಬಹುದೆ ಎಂಬುದೂ ಇನ್ನೊಂದು ಪ್ರಶ್ನೆಯಾಗಿದೆ.