ಅಮೃತಸರ : ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಅಕಾಲಿದಳ್ ಮುಖಂಡ ಮುಖ್ ಜೀತ್ ಸಿಂಗ್ ಮುಖಾ ಬಲಿಯಾಗಿರುವ ಘಟನೆ ಪಂಜಾಬ್ ನ ಅಮೃತಸರದಲ್ಲಿ ನಡೆದಿದೆ.
ಸಿವಿಲ್ ಡ್ರೆಸ್ ನಲ್ಲಿದ್ದ ಪೊಲೀಸ್ ಕಾರಿನೊಳಗಿದ್ದ ಮುಖಾ ಅವರನ್ನು ವಿಚಾರಣೆ ನಡೆಸಿ, ತಪಾಸಣೆ ನಡೆಸಿದ್ದರು. ಆ ಸಂದರ್ಭದಲ್ಲಿ ಪೊಲೀಸ್ ಗುಂಡು ಹಾರಿಸಿದ ಪರಿಣಾಮ ಮುಖಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದೊಂದು ಪ್ರಮಾದದಿಂದ ನಡೆದ ಘಟನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಕ್ರಿಮಿನಲ್ ಎಂದು ತಪ್ಪಾಗಿ ಭಾವಿಸಿ ನಡೆಸಿದ ಎನ್ ಕೌಂಟರ್ ನಲ್ಲಿ ಮುಖಾ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ತಮಗೆ ಬಂದ ಮಾಹಿತಿಯೊಂದರ ಪ್ರಕಾರ, ನಂಬರ್ ಪ್ಲೇಟ್ ಹೊಂದಿಲ್ಲದ ಐ20 ಕಾರಿನಲ್ಲಿ ವ್ಯಕ್ತಿಯೊಬ್ಬ ಹೋಗುತ್ತಿದ್ದಾರೆ ಎಂದು ತಿಳಿಸಿದ್ದರು. ಆ ಪ್ರಕಾರ ಪೊಲೀಸರು ತಪಾಸಣೆ ಹೋದಾಗ ಮುಖಾ ಕೂಡಾ ಗುಂಡಿನ ದಾಳಿ ನಡೆಸಿದ್ದರು. ಆಗ ನಡೆಸಿದ ಪ್ರತಿದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ವಿವರಿಸಿವೆ.
ಮುಖಾ ಅಮೃತ್ ಸರ್ ಮುನ್ಸಿಪಲ್ ಕಾರ್ಪೋರೇಶನ್ ವಾರ್ಡ್ ನಂ16ರ ಯುವ ಅಕಾಲಿದಳದ ಇನ್ ಚಾರ್ಜ್ ಆಗಿದ್ದಾರೆ. ಮುಖಾ ಅವರನ್ನು ಪೊಲೀಸರು ವ್ಯವಸ್ಥಿತವಾಗಿ ಹತ್ಯೆಗೈದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.