ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 12 ದಿನಗಳಿಂದ ನಡೆಯುತ್ತಿದ್ದ ಪೌರಕಾರ್ಮಿಕರ ಮುಷ್ಕರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಕೊಳೆತು ನಾರುತ್ತಿರುವ ಕಸ ಇನ್ನೂ ವಿಲೇವಾರಿಯಾಗಬಹುದು ಎಂದು ಜನರು ನಿಟ್ಟುಸಿರುಬಿಡುತ್ತಿರುವಾಗಲೇ, ಕಸದ ಹೆಸರಿನಲ್ಲಿ ಆಪ್ ಮತ್ತು ಬಿಜೆಪಿ ನಡುವೆ ಭರ್ಜರಿ ರಾಜಕೀಯ ಆರಂಭವಾಗಿದೆ.
ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆದಿಯಾಗಿ ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷದ ಲಾಂಛನವಾದ ಪೊರಕೆ ಹಿಡಿದು ಕಸ ವಿಲೇವಾರಿ ಮಾಡಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಕೂಡ ತಮ್ಮ ಕಾರ್ಯಕರ್ತರೊಂದಿಗೆ ಪೊರಕೆ ಹಿಡಿದು ಕಸ ಎತ್ತಿದ್ದಾರೆ.
ರಾಜಕೀಯ ನಾಯಕರ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲವೂ ಸ್ವಚ್ಛಗೊಳ್ಳುತ್ತಿರುವಾಗ ಈ ರಾಜಕಾರಣಿಗಳು ಈಗ ಏಕೆ ಬರುತ್ತಿದ್ದಾರೆ? ಈ ವಿಚಾರದಲ್ಲೂ ರಾಜಕೀಯ ಏಕೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಈ ನಡುವೆ, 12 ದಿನಗಳಿಂದ ಪೌರಕಾರ್ಮಿಕರು ಮುಷ್ಕರ ನಡೆಸುತ್ತಿದ್ದರೂ ಬಿಜೆಪಿ, ಆಪ್ ನಾಯಕರು ಅವರನ್ನು ಭೇಟಿ ಮಾಡಲಿಲ್ಲ. ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭೇಟಿ ಮಾಡಿದ ಬಳಿಕವಷ್ಟೇ ಪೌರ ಕಾರ್ಮಿಕರು ಮುಷ್ಕರ ಅಂತ್ಯಗೊಳಿಸಿದ್ದಾರೆ. ಬಳಿಕ ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಏತನ್ಮಧ್ಯೆ, ಕಸ ವಿಲೇವಾರಿ ವಿಚಾರವಾಗಿ ಕಾಂಗ್ರೆಸ್- ಆಪ್ ನಡುವೆ ಟ್ವೀಟರ್ ನಲ್ಲಿ ಜಟಾಪಟಿಯೂ ನಡೆದಿದೆ. ಪೌರಕಾರ್ಮಿಕರ ಮುಷ್ಕರ ಹಿಂತೆಗೆದುಕೊಂಡ ಬಳಿಕ ಆಪ್ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮ ನಡೆಸಿರುವುದು ಕೇವಲ ಫೋಟೋ ತೆಗೆಸಿಕೊಳ್ಳಲು. ಮೋದಿ ಹಾಗೂ ಕೇಜ್ರಿವಾಲ್ ಅವರು ನಾಟಕದಲ್ಲಿ ಸಿದ್ಧಹಸ್ತರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಟೀಕಿಸಿದ್ದಾರೆ. ಸಫಾಯಿ ಕರ್ಮಚಾರಿಗಳ ನೋವು ತಿಳಿಯಲು ಈ ಫೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮದಲ್ಲಾದರೂ ದಿಗ್ವಿಜಯ ಸಿಂಗ್ ಭಾಗಿಯಾಗಲಿ ಎಂದು ಆಪ್ ನ ಆಶುತೋಶ್ ಟಾಂಗ್ ನೀಡಿದ್ದಾರೆ.