ವಾರಣಾಸಿ : ಸದಾ ವಿವಾದಿತ ಹೇಳಿಕೆಗಳಿಂದಲೆ ಸುದ್ದಿಯಲ್ಲಿರುವ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್, ಯೋಗ, ಸೂರ್ಯ ನಮಸ್ಕಾರ ವಿರೋಧಿಸುವವರನ್ನು ಸಮುದ್ರದಲ್ಲಿ ಮುಳುಗಿಸಬೇಕು ಇಲ್ಲವೇ ಭಾರತದಿಂದ ಹೊರಗೆ ಹಾಕಬೇಕು ಎಂದು ಹೇಳುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯೋಗ ದಿನದಂದು ಸೂರ್ಯ ನಮಸ್ಕಾರ ಮಾಡುವ ಕುರಿತು ಅಪಸ್ವರ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಾರಣಾಸಿಯ ಅನ್ನಪೂರ್ಣ ಮಂದಿರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಸೂರ್ಯ ನಮಸ್ಕಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರನ್ನು ದೇಶದಿಂದ ಹೊರಗೆ ಹಾಕಬೇಕು ಇಲ್ಲವೇ ಬೆಳಕಿಲ್ಲದ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಬೇಕು ಎಂದು ಹೇಳಿದ್ದಾರೆ.
ಅಂತರಾಷ್ಟ್ರೀಯ ಯೋಗದಿಂದು 100 ಕ್ಕೂ ಹೆಚ್ಚು ದೇಶಗಳು ಸೂರ್ಯ ನಮಸ್ಕಾರ, ಯೋಗ ಮಾಡಲು ಒಪ್ಪಿಗೆ ಸೂಚಿಸಿದೆ. ಈ 100 ದೇಶಗಳಲ್ಲಿ 40 ದೇಶಗಳು ಮುಸ್ಲಿಂ ಸಮುದಾಯದ ದೇಶಗಳಾಗಿವೆ. ಸೂರ್ಯ ನಮಸ್ಕಾರ ಎಂಬುದು ಯೋಗದ ಒಂದು ಭಾಗ. ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯ ಹಾಗೂ ಮನಸ್ಸು ಶುದ್ಧಗೊಳ್ಳುತ್ತದೆ. ಸೂರ್ಯ ಎಂದಿಗೂ ಜಾತಿ, ಧರ್ಮ ಎಂದು ಭೇದ ಮಾಡಿ ಬೆಳಕು ನೀಡುವುದಿಲ್ಲ. ಇಂತಹ ಸೂರ್ಯ ನಮಸ್ಕಾರಕ್ಕೆ ಸಂಪ್ರದಾಯ ಎಂದು ಹೇಳಿ ವಿರೋಧ ವ್ಯಕ್ತಪಡಿಸುತ್ತಿರುವವರನ್ನು ಭಾರತದಿಂದ ಹೊರಗೆ ಹಾಕಬೇಕು ಇಲ್ಲವೇ ಜೀವನ ಪರ್ಯಂತ ಬೆಳಕಿಲ್ಲದ ಕೋಣೆಯಲ್ಲಿ ಹಾಕಬೇಕು ಎಂದು ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ದೇಶದಾದ್ಯಂತ ಎಲ್ಲಾ ಶಾಲೆಗಳಲ್ಲಿ ಸೂರ್ಯ ನಮಸ್ಕಾರ ಹಾಗೂ ಯೋಗ ಕಡ್ಡಾಯಗೊಳಿಸುವ ಕುರಿತಂತೆ ಕೇಂದ್ರ ಸರ್ಕಾರ ಆಲೋಚನೆ ನಡೆಸಿತ್ತು. ಇದಕ್ಕೆ ಅಖಿಲ ಭಾರತ ಮುಸ್ಲಿಮರ ವೈಯಕ್ತಿಕ ಕಾನೂನು ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ಅಂತರಾಷ್ಟ್ರೀಯ ಯೋಗ ದಿನದಂದೇ ಶಾಲೆಗಳಲ್ಲಿ ಸೂರ್ಯ ನಮಸ್ಕಾರ ಹಾಗೂ ಯೋಗ ಕಡ್ಡಾಯ ವಿರೋಧಿ ಅಭಿಯಾನವನ್ನು ನಡೆಸುವುದಾಗಿ ಹೇಳಿತ್ತು.