ನವದೆಹಲಿ : ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಭಾರೀ ಚಂಡಮಾರುತವಾಗಿ ಪರಿವರ್ತಿತಗೊಂಡಿದ್ದು, ಮುಂದಿನ 24-36 ಗಂಟೆಗಳಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕರಾವಳಿ ತೀರದಲ್ಲಿ ಭಾರೀ ಮಳೆಗೆ ಕಾರಣವಾಗಲಿದೆ.
ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ, ಅರಬ್ಬಿ ಸಮುದ್ರದ ಮಧ್ಯಪೂರ್ವ ಭಾಗದಲ್ಲಿ ಭಾರೀ ವಾಯುಭಾರ ಕುಸಿತ ಉಂಟಾಗಿತ್ತು. ಅದೀಗ, ಚಂಡಮಾರುತವಾಗಿ ಪರಿವರ್ತಿತಗೊಂಡಿದೆ. ಮುಂದಿನ ಕೆಲ ಸಮಯದಲ್ಲಿ ಅದು ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದೆ. ಈ ಚಂಡಮಾರುತ ಸದ್ಯ ಉತ್ತರ ಮತ್ತು ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿದೆ. ಆದರೂ ಚಂಡಮಾರುತದ ಪರಿಣಾಮ ಕರ್ನಾಟಕ ಗೋವಾ ಮತ್ತು ಮಹಾರಾಷ್ಟ್ರ ಕರಾವಳಿ ತೀರದಲ್ಲಿ ಭಾರೀ ಮಳೆ ಸುರಿಸಲಿದೆ ಎಂದು ಹೇಳಿದೆ. ಈ ಚಂಡಮಾರುತಕ್ಕೆ 'ಅಶೋಬಾ' ಎಂದು ಹೆಸರಿಡಲಾಗಿದೆ.
ಪ್ರಸಕ್ತ ಚಂಡಮಾರುತಕ್ಕೆ ಹೆಸರಿಡುವ ಅವಕಾಶ ಶ್ರೀಲಂಕಾ ಸರ್ಕಾರದ್ದಾಗಿದ್ದು, ಅದು 'ಅಶೋಬಾ' ಎಂದು ಹೆಸರಿಟ್ಟಿದೆ.
ಚಂಡಮಾರುತದ ನೇರ ಪರಿಣಾಮ ಭಾರತದಲ್ಲಿ ಆಗದೇ ಇದ್ದರೂ, ಅದರ ಪರೋಕ್ಷ ಪರಿಣಾಮಗಳ ಕಾರಣ, ದೇಶದ ಕರಾವಳಿ ತೀರದಲ್ಲಿ ಮುಂದಿನ 24 ಗಂಟೆಗಳಲ್ಲಿ ಗಂಟೆಗೆ 90 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಅದರ ಮುಂದಿನ 24 ಗಂಟೆಗಳಲ್ಲಿ ಗಾಳಿಯ ವೇಗ 100- 120 ಕಿ.ಮೀ ತಲುಪಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈ ಹವಾಮಾನ ಬದಲಾವಣೆಯಿಂದ ಮುಂಗಾರಿನ ಪ್ರಗತಿಗೆ ತೊಂದರೆಯಾಗಲಿದೆ ಎಂದು ಹವಾಮಾನ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.