ನವದೆಹಲಿ : ಒನ್ ರಾಂಕ್, ಒನ್ ಪೆನ್ಶನ್(ಸಮಾನ ಶ್ರೇಣಿ, ಸಮಾನ ಪಿಂಚಣಿ) ಯೋಜನೆ ಜಾರಿಗೆ ಸಂಬಂಧಿಸಿದಂತೆ ಆಡಳಿತಾರೂಢ ಎನ್.ಡಿ.ಎ ಸರ್ಕಾರ ನಿಖರ ದಿನಾಂಕವನ್ನು ಘೋಷಿಸಬೇಕೆಂದು ಮಾಜಿ ಸೈನಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿ ಪತ್ರ ಬರೆದಿರುವ ಮಾಜಿ ಸೈನಿಕರು, ಕೇಂದ್ರ ಸರ್ಕಾರ ಜೂನ್ 15ರೊಳಗೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಡೆಡ್ ಲೈನ್ ವಿಧಿಸಿದ್ದು, ಇದಕ್ಕೆ ತಪ್ಪಿದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಏತನ್ಮಧ್ಯೆ ರಕ್ಷಣಾ ಸಚಿವ ಮನೋಹರ್ ಪರ್ರೀಕರ್ ಮಾಜಿ ಸೈನಿಕರ ಜೊತೆ ನಡೆಸಿದ ಮೊದಲ ಸುತ್ತಿನ ಸಂಧಾನ ಮಾತುಕತೆಯೂ ವಿಫಲವಾಗಿದೆ ಎಂದು ನಿವೃತ್ತ ಮೇಜರ್ ಜನರಲ್ ಸತ್ ಬೀರ್ ಸಿಂಗ್ ತಿಳಿಸಿದ್ದಾರೆ. ಇದೀಗ ಸಚಿವ ಪರ್ರೀಕರ್ ಜೊತೆ 2ನೇ ಸುತ್ತಿನ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ..
ಈ ಯೋಜನೆ ಜಾರಿಯ ದಿನಾಂಕ ಘೋಷಿಸಲು ಕೇಂದ್ರ ಸರ್ಕಾರ ವಿಫಲವಾದರೆ, ನಾವು ಜೂನ್ 15ರ ಕಾರ್ಗಿಲ್ ದಿನಾಚರಣೆಯಂದು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಮಾಜಿ ಸೈನಿಕರು ತಿಳಿಸಿದ್ದಾರೆ.
ಒನ್ ರಾಂಕ್, ಒನ್ ಪೆನ್ಶನ್ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.