ಪಾಟ್ನಾ : ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜಿತನ್ ರಾಂ ಮಾಂಝಿ ನಡುವಿನ ರಾಜಕೀಯ ಕಿತ್ತಾಟ ತಾರಕಕ್ಕೇರಿದೆ. ಮಾಜಿ ಸಿಎಂ ಮಾಂಝಿ ನಿವಾಸದ ಪ್ರದೇಶದಲ್ಲಿರುವ ಮಾವಿನ ಮರ ಮತ್ತು ಲಿಚಿ ಹಣ್ಣುಗಳ ಕಾವಲಿಗಾಗಿ ಮಾಂಝಿ ವಾಸವಾಗಿರುವ ಬಂಗ್ಲೆಯ ಪ್ರದೇಶಕ್ಕೆ ಸುಮಾರು 24 ಪೊಲೀಸರನ್ನು ನಿತೀಶ್ ಕುಮಾರ್ ನೇಮಕ ಮಾಡಿದ್ದಾರೆ.
ಮಾಂಝಿ ಬಂಗ್ಲೆಯ ಪ್ರದೇಶದಲ್ಲಿರುವ ಮಾವಿನ ಹಣ್ಣು, ಲಿಚಿ ಹಣ್ಣುಗಳನ್ನು ಕಿತ್ತು ತಿನ್ನದಂತೆ ತಡೆಯೊಡ್ಡಲು ನಿತೀಶ್ ಕುಮಾರ್ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮಾಂಝಿ ಹಾಗೂ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿತನ್ ರಾಮ್ ಮಾಂಝಿ ಮಾಜಿ ಮುಖ್ಯಮಂತ್ರಿಯಾಗಿದ್ದರೂ ಕೂಡಾ ಸಿಎಂ ಅಧಿಕೃತ ನಿವಾಸವನ್ನು ಇನ್ನೂ ಬಿಟ್ಟಿಲ್ಲ. ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ 7 ಸರ್ಕ್ಯುಲರ್ ರಸ್ತೆಯಲ್ಲಿನ ಬಂಗ್ಲೆಯಲ್ಲಿ ವಾಸಿಸುತ್ತಿದ್ದಾರೆ. 1 ಆಣೆ ಮಾರ್ಗ್ ನಲ್ಲಿರುವ ಮಾಂಝಿ ಬಂಗ್ಲೆಯ ನಿವಾಸದ ಪ್ರದೇಶದಲ್ಲಿನ ನೂರಾರು ಮಾವಿನ ಮರಗಳನ್ನು ಹಾಗೂ ಲಿಚಿ ಹಣ್ಣುಗಳ ಕಾವಲಿಗಾಗಿ 8 ಸಬ್ ಇನ್ಸ್ ಪೆಕ್ಟರ್ಸ್ಸ್ ಹಾಗೂ 16 ಕಾನ್ಸ್ ಸ್ಟೇಬಲ್ಸ್ ಗಳನ್ನು ನೇಮಕ ಮಾಡಲಾಗಿದೆ ಎಂದು ಹಿಂದುಸ್ತಾನಿ ಏವಂ ಮೋರ್ಚಾ ಪಕ್ಷದ ವಕ್ತಾರ ದಾನೀಶ್ ರಿಜ್ವಾನ್ ತಿಳಿಸಿದ್ದಾರೆ.
ಮರದಲ್ಲಿದ್ದ ಹಣ್ಣುಗಳನ್ನು ತೆಗೆಯುವುದಾಗಲಿ ಅಥವಾ ಕೆಳಕ್ಕೆ ಬಿದ್ದ ಹಣ್ಣುಗಳನ್ನು ತೆಗೆದುಕೊಳ್ಳದಂತೆ ತಡೆಯಬೇಕು ಎಂದು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇದು ನಿಜಕ್ಕೂ ದಲಿತರಿಗೆ ಮಾಡಿರುವ ಅವಮಾನ ಎಂದು ರಿಜ್ವಾನ್ ಆರೋಪಿಸಿದ್ದಾರೆ.
ಮಾಂಝಿ ಮನೆಗೆ ಭೇಟಿ ನೀಡುವವರಾಗಲಿ, ಸ್ವತಃ ಮಾಂಝಿ ಕುಟುಂಬದ ಸದಸ್ಯರೂ ಕೂಡಾ ಮಾವಿನ ಹಣ್ಣಾಗಲಿ, ಲಿಚಿ ಹಣ್ಣುಗಳನ್ನು ತೆಗೆಯಲು ಅವಕಾಶ ನೀಡುತ್ತಿಲ್ಲ ಎಂದು ಮಾಂಝಿ ಅಳಿಯ ದೇವೇಂದ್ರ ಮಾಂಝಿ ತಿಳಿಸಿದ್ದಾರೆ.
ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಗಮನಕೊಡಿ, ಅದನ್ನು ಬಿಟ್ಟು ಮಾವಿನ ಮರ, ಲಿಚಿ ಹಣ್ಣು ಕಾವಲಿಗಾಗಿ ಪೊಲೀಸರನ್ನು ನೇಮಕ ಮಾಡುವುದು ಹಾಸ್ಯಾಸ್ಪದ ಎಂದು ರಾಷ್ಟ್ರೀಯ ಜನತಾ ದಳದ ಉಪಾಧ್ಯಕ್ಷ ರಘುವಂಶ್ ಪ್ರಸಾದ್ ಸಿಂಗ್ ನಿತೀಶ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.