ಬೆಂಗಳೂರು : ಗ್ರಾಮಪಂಚಾಯ್ತಿ ಚುನಾವಣೆ ನಂತರವಾದರೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಯುತ್ತದೆ ಎಂದು ಕಾಯುತ್ತಿದ್ದ ಕಾಂಗ್ರೆಸ್ ನ ಹಿರಿಯ ಶಾಸಕರಿಗೆ ಮತ್ತೂಮ್ಮೆ ಹಿನ್ನಡೆಯಾಗಿದೆ.
ಹೈಕಮಾಂಡ್ ತಾಕೀತು ಮಾಡದಿದ್ದರೆ ಈ ಬಾರಿಯೂ ಸಂಪುಟ ವಿಸ್ತರಣೆ/ಪುನಾರಚನೆ ಮುಂದಕ್ಕೆ ಹೋಗಲಿದೆ. ಬಿಬಿಎಂಪಿ ಚುನಾವಣೆ ನೆಪದಲ್ಲಿ ಈ ಬಾರಿಯೂ ಸಂಪುಟ ವಿಸ್ತರಣೆ ಮುಂದೂಡುವ ಸಾಧ್ಯತೆ ದಟ್ಟವಾಗಿದೆ.
ಸಚಿವ ಸಂಪುಟದಲ್ಲಿ ಖಾಲಿಯಿರುವ ನಾಲ್ಕು ಹುದ್ದೆ ಭರ್ತಿ ಮಾಡುವ ಹಾಗೂ ಸುಮಾರು ಐದರಿಂದ ಹತ್ತು ಹಾಲಿ ಸಚಿವರನ್ನು ಬದಲಾಯಿಸುವ ಮನಸ್ಥಿತಿಯಲ್ಲಿ ಮುಖ್ಯಮಂತ್ರಿಯಿದ್ದಾರೆ. ಆದರೆ, ಯಾವಾಗ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಗ್ರಾ.ಪಂ. ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪಂಚಾಯ್ತಿ ಚುನಾವಣೆ ನಂತರ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಮಾಡುವುದಾಗಿ ಹೇಳಿದ್ದರು. ಇದೀಗ ಗ್ರಾ.ಪಂ. ಚುನಾವಣೆಯೂ ಮುಗಿದಿದೆ. ಸಿಎಂ ಘೋಷಣೆ ಪ್ರಕಾರ ಜೂನ್ ಎರಡನೇ ವಾರದೊಳಗೆ ಸಚಿವ ಸಂಪುಟ ಪುನಾರಚನೆ ನಡೆಯಬೇಕು.
ಆದರೆ, ಸಿಎಂ ಆಪ್ತ ಮೂಲಗಳ ಪ್ರಕಾರ ಈ ಸಾಧ್ಯತೆ ಕಡಿಮೆ. ಸುಪ್ರೀಂ ಕೋರ್ಟ್ ಮೂರು ತಿಂಗಳೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆ ನಡೆಸುವ ಅನಿವಾರ್ಯತೆ ಸರ್ಕಾರಕ್ಕಿದೆ. ಅಲ್ಲದೆ, ಸಂಪುಟ ಪುನಾರಚನೆ ವೇಳೆ ಬೆಂಗಳೂರಿನ ಇಬ್ಬರು ಪ್ರಮುಖ ಸಚಿವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆಯೂ ಇದೆ.
ಹೇಗಿದ್ದರೂ ಇದುವರೆಗೂ ಕಾದಿದ್ದಾಗಿದೆ. ಇನ್ನು ಮೂರು ತಿಂಗಳು ಕಾದು ಬಿಬಿಎಂಪಿ ಚುನಾವಣೆ ಪೂರ್ಣಗೊಳಿಸಿ ಅನಂತರ ಸಂಪುಟ ಪುನಾರಚನೆ ನಡೆಸುವುದು ಉತ್ತಮ ಎಂಬುದು ಸಿಎಂ ಆಪ್ತರ ಚಿಂತನೆ ಎನ್ನಲಾಗಿದೆ.
ಸಂಪುಟ ಪುನಾರಚನೆ ವಿಳಂಬಕ್ಕೆ ಮತ್ತೂಂದು ಕಾರಣವನ್ನೂ ನೀಡಲಾಗುತ್ತಿದೆ. ಅದು- ಹತ್ತಾರು ಜನಪಯೋಗಿ ಕಾರ್ಯಕ್ರಮಗಳನ್ನು ನೀಡಿದರೂ ರಾಜ್ಯ ಸರ್ಕಾರಕ್ಕೆ ಉತ್ತಮ ಇಮೇಜ್ ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಹಲವಾರು ಮಂದಿ ನಿಷ್ಕ್ರಿಯ ಸಚಿವರ ಉಪಸ್ಥಿತಿಯೇ ಕಾರಣ ಎಂದು ಬಿಂಬಿಸಲಾಗುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಭವಿಷ್ಯ ರೂಪಿಸಬೇಕು ಹಾಗೂ ಸರ್ಕಾರದ ಇಮೇಜನ್ನು ಉತ್ತುಂಗಕ್ಕೆ ಒಯ್ಯಬೇಕು ಎಂದರೆ ಕನಿಷ್ಠ 10 ಸಮರ್ಥ ನಾಯಕರನ್ನು ಸಚಿವ ಸಂಪುಟಕ್ಕೆ ಬರಮಾಡಿಕೊಳ್ಳಬೇಕು. ಇದಕ್ಕಾಗಿ ಆರರಿಂದ ಎಂಟು ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು. ಅಲ್ಲದೆ, ಸಂಪುಟದಿಂದ ಹೊರ ಹೋಗುವವರು ಸಮಾಧಾನದಿಂದ ಇರುವಂತೆಯೂ ನೋಡಿಕೊಳ್ಳಬೇಕು. ಇದಕ್ಕಾಗಿ ಅವರಿಗೆ ಪಕ್ಷ ಅಥವಾ ಇತರೆಡೆ ಸಮಾಧಾನಕರ ಸ್ಥಾನ-ಮಾನ ಒದಗಿಸಿಕೊಡಬೇಕು. ಈ ಎಲ್ಲಾ ಕ್ಲಿಷ್ಟಕರ ಪ್ರಕ್ರಿಯೆ ನಡೆಸಬೇಕಿರುವುದರಿಂದ ಸಂಪುಟ ವಿಸ್ತರಣೆಯನ್ನು ವಿಳಂಬ ಮಾಡಬೇಕು ಎಂಬ ಭಾವನೆ ಸಿಎಂ ಆಪ್ತವಲಯದಲ್ಲಿ ಮೂಡಿದೆ ಎನ್ನಲಾಗಿದೆ.