ಪಾಟ್ನಾ : ಬಿಹಾರ ವಿಧಾನಸಭೆ ಚುನಾವಣೆ ಸ್ಥಾನ ಹೊಂದಾಣಿಕೆ ವಿಚಾರವಾಗಿ ಜೆಡಿಯು ನಾಯಕ ನಿತೀಶ್ ಕುಮಾರ್-ಆರ್.ಜೆ.ಡಿ ಅಧಿನಾಯಕ ಲಾಲು ಯಾದವ್ ನಡುವೆ ನಡೆಯುತ್ತಿರುವ ಮಾತುಕತೆ ಮುರಿದುಬಿದ್ದು, ಮೈತ್ರಿ ಖತಂಗೊಂಡರೆ ಕಾಂಗ್ರೆಸ್ ಪಕ್ಷ ನಿತೀಶ್ ಜತೆ ಕೈಜೋಡಿಸುವ ಸಾಧ್ಯತೆ ಇದೆ.
ಈ ರಾಜಕೀಯ ವಿದ್ಯಮಾನವು ಜನತಾ ಪರಿವಾರದ ವಿಲೀನಕ್ಕೆ ದೊಡ್ಡ ಅಡ್ಡಿಯಾಗುವ ಸಾಧ್ಯತೆ ಇದೆ.
ನಿತೀಶ್ ಕುಮಾರ್ ಜತೆ ತಾವು ನಡೆಸುವ ಸ್ಥಾನ ಹೊಂದಾಣಿಕೆ ಮಾತುಕತೆ ವೇಳೆ ಕಾಂಗ್ರೆಸ್ ತಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ಲಾಲು ಬಯಸುತ್ತಿದ್ದಾರೆ. ಆದರೆ 2004, 2009 ಹಾಗೂ 2014ರಲ್ಲಿ ಲಾಲು ’ನ್ಯಾಯಸಮ್ಮತ'ವಲ್ಲದ ರೀತಿ ಕಾಂಗ್ರೆಸ್ಸಿಗೆ ಕಡಿಮೆ ಸ್ಥಾನ ಬಿಟ್ಟುಕೊಟಿದ್ದರು. ಹೀಗಾಗಿ ಲಾಲು-ನಿತೀಶ್ ನಡುವಣ ಮಾತುಕತೆ ಮುರಿದುಬಿದ್ದರೆ, ಲಾಲು ಪ್ರಸಾದ್ ಯಾದವ್ ಜತೆ ಮೈತ್ರಿ ತೊರೆದು, ನಿತೀಶ್ ಅವರೊಂದಿಗೆ ಚುನಾವಣೆ ಎದುರಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಶೀಘ್ರದಲ್ಲೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ನಿತೀಶ್ ಕುಮಾರ್ ಅವರು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ’ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ ನಿತೀಶ್ ಗೆ ನಾನು ಫೋನು ಮಾಡಿದ್ದೆ. ಸಮಯ ಮೀರುತ್ತಿದ್ದು, ಮೈತ್ರಿ ಬಗ್ಗೆ ನಿರ್ಧರಿಸಿ. ಚೆಂಡು ನಿಮ್ಮ ಅಂಗಳದಲ್ಲಿದೆ ಎಂದು ತಿಳಿಸಿದೆ' ಎಂದು ಲಾಲು ಪ್ರತಿಕ್ರಿಯಿಸಿದ್ದಾರೆ.