ನವದೆಹಲಿ : ಮಹತ್ವದ ಬಿಹಾರ ಹಾಗೂ ಉತ್ತರ ಭಾರತ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ದಲಿತರನ್ನು ಓಲೈಸಲು ಮುಂದಾಗಿವೆ. ಈ ನಿಟ್ಟಿನಲ್ಲಿ ಬಿಜೆಪಿ,
ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದರೆ, ಸಂವಿಧಾನ ಶಿಲ್ಪಿ ಹುಟ್ಟುಹಬ್ಬದ ನೆನಪಲ್ಲಿ ವರ್ಷವಿಡೀ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲು ಕಾಂಗ್ರೆಸ್ ಹೊರಟಿದೆ.
ಈಗಾಗಲೇ ಗಾಂಧೀಜಿ, ನೆಹರೂ, ಪಿ.ವಿ.ನರಸಿಂಹರಾವ್ ಮತ್ತಿತರ ನಾಯಕರನ್ನು ಕಾಂಗ್ರೆಸ್ ಕೈಯಿಂದ ಹೈಜಾಕ್ ಮಾಡಿರುವ ಬಿಜೆಪಿ ಈಗ, ಪ್ರತಿಪಕ್ಷಕ್ಕೆ ಡಾ. ಅಂಬೇಡ್ಕರ್ ಮೂಲಕ ಮತ್ತೊಂದು ಟಾಂಗ್ ನೀಡಲು ಹೊರಟಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದೆ. ಇದಕ್ಕಾಗಿ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶ, ಕಚೇರಿ ಹಾಗೂ ಸಚಿವಾಲಯಗಳು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಸಲಹೆ ನೀಡಿದೆ.
ಅಂಬೇಡ್ಕರ್ ಚಿಂತನೆ, ಆದರ್ಶಗಳನ್ನು ಪಸರಿಸಲು 16 ಪ್ರಮುಖ ಕಾರ್ಯಗಳನ್ನು ಪಟ್ಟಿ ಮಾಡಿದ್ದು, 197 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರ ನಿರ್ಮಿಸುವ ನಿರ್ಧಾರವನ್ನೂ ಸಚಿವ ಸಂಪುಟದಲ್ಲಿ ಕೈಗೊಳ್ಳಲಾಯಿತು. ಅವರ ಜನ್ಮದಿನವನ್ನು ರಾಷ್ಟ್ರೀಯ ಸ್ನೇಹ ಮತ್ತು ಭ್ರಾತೃತ್ವದ ದಿನವನ್ನಾಗಿ ಆಚರಿಸುವ ಕುರಿತೂ ಪ್ರಸ್ತಾವನೆಯಾಗಿದೆ. ಅಲ್ಲದೇ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರ ನಿರ್ಮಿಸುವ ನಿರ್ಧಾರವನ್ನೂ ಸಚಿವ ಸಂಪುಟದಲ್ಲಿ ಕೈಗೊಳ್ಳಲಾಯಿತು.
ದೆಹಲಿಯ ಅಲಿಪುರ್ ನಲ್ಲಿ ರು. 99 ಕೋಟಿ ವೆಚ್ಚದ ಅಂಬೇಡ್ಕರ್ ಸ್ಮಾರಕದ ನಿರ್ಮಾಣಕ್ಕೂ ಚಾಲನೆ ಸಿಗಲಿದೆ. ಅಂಬೇಡ್ಕರ್ ಓದಿದ್ದ ಕೊಲಂಬಿಯಾ ವಿವಿಗೆ ಪ್ರತಿವರ್ಷ ನೂರು ವಿದ್ಯಾರ್ಥಿಗಳನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಿಕೊಡುವ ಕುರಿತೂ ನಿರ್ಧರಿಸಲಾಗಿದೆ.
ಇನ್ನು ಉತ್ತರ ಭಾರದಲ್ಲಿ ದಲಿತರು ಕಾಂಗ್ರೆಸ್ ನಿಂದ ದೂರ ಸರಿದಿರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಹುಟ್ಟೂರಿನಲ್ಲಿ ಜನ್ಮದಿನ ಕಾರ್ಯಕ್ರಮಕ್ಕೆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.