ನವದೆಹಲಿ : ನೈಋತ್ಯ ಮುಂಗಾರು ಮಾರುತಗಳು ಶನಿವಾರವೇ ಕೇರಳ ಪ್ರವೇಶಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಮುಂಗಾರು ತುಸು ವಿಳಂಬವಾಗಿದ್ದು, ಜೂ.1ರ ಸೋಮವಾರ ಅಥವಾ ಜೂನ್ 3ರ ಬುಧವಾರ ಆಗಮಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಜೂ.1ರಂದು ಕೇರಳ ಮೂಲಕ ದೇಶವನ್ನು ಮುಂಗಾರು ಮಾರುತಗಳು ಪ್ರವೇಶಿಸುವುದು ವಾಡಿಕೆ. ಆದರೆ ಈ ಬಾರಿ ಮೇ 30ರ ಶನಿವಾರವೇ ಮುಂಗಾರು ಮಾರುತಗಳ ಆಗಮನವಾಗಲಿದೆ. ಈ ಮುನ್ಸೂಚನೆಯಲ್ಲಿ 4 ದಿನದ ವ್ಯತ್ಯಾಸದ ಸಾಧ್ಯತೆ ಇರುತ್ತದೆ ಎಂದು ಹವಾಮಾನ ತಜ್ಞರು ತಿಳಿಸಿದ್ದರು. ಅದರಂತೆ ಶನಿವಾರ ಮುಂಗಾರು ಪ್ರವೇಶಿಸಿಲ್ಲವಾದ ಕಾರಣ ವಾಡಿಕೆಯಂತೆ ಜೂ.1 ಅಥವಾ 3ರಂದು ಆಗಮಿಸುವ ಸಂಭವವಿದೆ.
ಸದ್ಯ ಮುಂಗಾರು ಮಾರುತಗಳು ಶ್ರೀಲಂಕಾದ ದಕ್ಷಿಣ ಭಾಗದಲ್ಲಿವೆ. ಈ ಬಾರಿ ಎಲ್ ನಿನೋ ಪರಿಣಾಮದಿಂದಾಗಿ ಭಾರತದಲ್ಲಿ ಮಳೆ ಕೊರತೆ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿರಬಹುದು ಎಂಬ ಮುನ್ಸೂಚನೆ ಇದೆ.