ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ನೀತಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆಂದು ಆರೋಪದ ಹಿನ್ನೆಲೆಯಲ್ಲಿ ಮದ್ರಾಸ್ ಐಐಟಿ ಕಾಲೇಜು ವಿದ್ಯಾರ್ಥಿ ಸಂಘಟನೆ, 'ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್' ಅನ್ನು ನಿಷೇಧಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ನಿವಾಸದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು ಸಚಿವೆ ಇರಾನಿ ಹಾಗೂ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೊಲೀಸರು ಹಲವು ಪ್ರತಿಭಟನೆಕಾರರನ್ನು ಬಂಧಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಎನ್.ಡಿ.ಎ ಸರ್ಕಾರದ ನೀತಿಗಳನ್ನು ಟೀಕಿಸಿದ ಮತ್ತು ತಮ್ಮ ವಿಚಾರಧಾರೆಗಳ ಮೂಲಕ ವಿದ್ಯಾರ್ಥಿಗಳನ್ನು ಎತ್ತಿಕಟ್ಟುತ್ತಿದ್ದಾರೆಂಬ ಅನಾಮಧೇಯ ದೂರೊಂದರ ಹಿನ್ನೆಲೆಯಲ್ಲಿ (ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್) ಐಐಟಿ ಮದ್ರಾಸ್, ವಿದ್ಯಾರ್ಥಿ ಸಂಘಟನೆ, 'ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್' ಮೇಲೆ ನಿಷೇಧ ಹೇರಿದೆ. ಇದು ದೊಡ್ಡ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಮಾನವ ಸಂಪನ್ಮೂಲ ಇಲಾಖೆ ಸಚಿವಾಲಯ ಈ ಬಗ್ಗೆ ಕಾಲೇಜಿಗೆ ಸ್ಪಷ್ಟೀಕರಣ ಕೇಳಿತ್ತು. ಈ ಹಿನ್ನಲೆಯಲ್ಲಿ ಮದ್ರಾಸ್ ಐಐಟಿ ಕಾಲೇಜು ಸಂಘಟನೆಯನ್ನು ನಿಷೇಧಿಸಿತ್ತು.
ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್ ನರೇಂದ್ರ ಮೋದಿ ನೀತಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಎಚ್ ಆರ್ ಡಿಗೆ ಅನಾಮಧೇಯ ಪತ್ರ ಬರೆಯಲಾಗಿತ್ತು.
ಹಿಂದಿ ಭಾಷಾ ಬಳಕೆ, ಗೋಮಾಂಸ ನಿಷೇಧ ಕುರಿತಂತೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಮೂಲಕ ದ್ವೇಷ ಹರಡಲು ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ ಸರ್ಕಲ್(ಎಪಿಎಸ್ ಸಿ) ಯತ್ನಿಸುತ್ತಿರುವುದಾಗಿ ಆರೋಪಿಸಿ ಅನಾಮಧೇಯ ಪತ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ತಲುಪಿತ್ತು.
ಈ ಹಿನ್ನೆಲೆಯಲ್ಲಿ ಸಚಿವಾಲಯ ಪ್ರತಿಕ್ರಿಯೆ ನೀಡುವಂತೆ ಐಐಟಿ ಕಾಲೇಜಿಗೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸಿತ್ತು.