ಜೈಪುರ್ : ಶೇ.5ರಷ್ಟು ಮೀಸಲಾತಿಗೆ ಆಗ್ರಹಿಸಿ ಗುಜ್ಜಾರ್ ಸಮುದಾಯದವರು ರೈಲು ತಡೆ ಮೂಲಕ ನಡೆಸುತ್ತಿರುವ ಪ್ರತಿಭಟನೆಗೆ ರಾಜಸ್ಥಾನ ಹೈಕೋರ್ಟ್, ರಾಜ್ಯ ಮುಖ್ಯಕಾರ್ಯದರ್ಶಿ ಹಾಗೂ ಡಿಜಿಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಪ್ರತಿಭಟನಾ ನಿರತ ಗುಜ್ಜಾರ್ ಸಮುದಾಯದ ಸದಸ್ಯರನ್ನು ಬಂಧಿಸಿ, ಪ್ರತಿಭಟನೆಯನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದ ಬಗ್ಗೆ ಅಸಮಾಧಾನವ್ಯಕ್ತಪಡಿಸಿದೆ. ಮುಖ್ಯಕಾರ್ಯದರ್ಶಿ ಸಿಎಸ್ ರಾಜನ್ ಮತ್ತು ಡಿಜಿಪಿ ಅವರನ್ನು ಹೈಕೋರ್ಟ್ ಪೀಠ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಬಹುದು ಎಂದು ಕಳವಳ ವ್ಯಕ್ತಪಡಿಸಿರುವ ಕೋರ್ಟ್, ಗುಜ್ಜಾರ್ ಸಮುದಾಯದವರ ಪ್ರತಿಭಟನೆಯಿಂದಾಗಿ ರೈಲ್ವೆ ಇಲಾಖೆ ಹಾಗೂ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಲಿದೆ ಎಂದು ಹೇಳಿದೆ.
ಕೂಡಲೇ ಪ್ರತಿಭಟನೆ ನಿಲ್ಲಿಸಲು ಸೂಕ್ತ ಕ್ರಮ ಕೈಗೊಂಡು ರಾಜಸ್ಥಾನದಲ್ಲಿ ಶಾಂತಿ ಕಾಪಾಡುವಂತೆ ಕೋರ್ಟ್ ಸೂಚನೆ ನೀಡಿರುವುದಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.
ಗುಜ್ಜಾರ್ ಸಮುದಾಯದವರು ಮೇ 21ರಿಂದ ರಾಜಸ್ಥಾನಕ್ಕೆ ತೆರಳುವ ಎಲ್ಲಾ ರೈಲು ಮಾರ್ಗಗಳಲ್ಲಿ ರೈಲು ತಡೆ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಂಬಯಿ-ಹೊಸದಿಲ್ಲಿ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕ ಮತ್ತು ಗೂಡ್ಸ್ ರೈಲುಗಳ ಸಂಚಾರ ಸ್ಥಗಿತಗೊಂಡಿರುವುದರಿಂದಾಗಿ ಪಶ್ಚಿಮ ರೈಲ್ವೇಗೆ ಪ್ರತೀ ದಿನ 15ಕೋ. ರೂ.ಗಳ ನಷ್ಟ ಸಂಭವಿಸುತ್ತಿದೆ. ಗುಜ್ಜಾರ್ ಸಮುದಾಯ ಪ್ರತಿಭಟನೆ ಆರಂಭಿಸಿದಂದಿನಿಂದ ಪ್ರತೀ ದಿನ 15-20ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತಿದೆ.