ಮೈಸೂರು : ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಯದುವಂಶದ ಉತ್ತರಾಧಿಕಾರಿಯಾಗಿ, 27ನೇ ಮಹಾರಾಜರಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷೇಕ ನೆರವೇರಿದೆ.
ನಾಲ್ಕು ದಶಕಗಳ ಬಳಿಕ ಅರಮನೆಯಲ್ಲಿ ಪಟ್ಟಾಭಿಷೇಕದ ಸಡಗರ-ಸಂಭ್ರಮ ಮೇಳೈಸಿದವು. ಪಟ್ಟಾಭಿಷೇಕದ ಅಂಗವಾಗಿ ಹೋಮ ಹವನ ಸೇರಿದಂತೆ ಹಲವಾರು ಧಾರ್ಮಿಕ ಆಚರಣೆಗಳು ನಡೆದವು.
ಎಣ್ಣೆಶಾಸ್ತ್ರ, ಕಂಕಣಧಾರಣೆ ನಂತರ ಹೋಮ, ಹವನಗಳನ್ನು ಪುರೋಹಿತರು ನೆರವೇರಿಸಿದರು. ಆಮೇಲೆ ರಾಜ ಗುರುಗಳಾದ ಬ್ರಹ್ಮತಂತ್ರ ಪರತಂತ್ರ ಪರಕಾಲ ಮಠದ ಗುರುಗಳಾದ ಅಭಿನವ ವಾಗೀಶ ಬ್ರಹ್ಮತಂತ್ರ ಪರಕಾಲ ಸ್ವಾಮೀಜಿ ಪಾದಗಳಿಗೆ ಯದುವೀರ ಅವರು ಪೂಜೆ ನೆರವೇರಿಸಿದರು.
ಅರಮನೆಯಲ್ಲಿ ಬೆಳಿಗ್ಗೆ ಲಕ್ಷ್ಮೀನಾರಾಯಣ ಹೋಮ, ಉಮಾಮಹೇಶ್ವರ ಹೋಮ, ವಾಣಿಬ್ರಹ್ಮ ಹೋಮ, ಶ್ರೀರಾಮ ತಾರಕ ಹೋಮ ನಡೆಸಲಾಯಿತು. ನಂತರ ಅರಮನೆಯ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9.30ರಿಂದ 10.35ರ ಒಳಗೆ ನಡೆದ ಕರ್ಕಾಟಕ ಶುಭಲಗ್ನದಲ್ಲಿ ಯದುವೀರ್ ಅವರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯಿತು.
ಮಧ್ಯಾಹ್ನ 3 ಗಂಟೆಯಿಂದ ಅರಮನೆ ಹಾಗೂ ನಗರದ ಪ್ರಮುಖ ದೇವಾಲಯಗಳಿಗೆ ಯದುವೀರ ಮಹರಾಜರು ಭೇಟಿ ನೀಡಲಿದ್ದಾರೆ. ಸಂಜೆ 6.30 ಗಂಟೆಗೆ ದರ್ಬಾರ್ ಹಾಲ್ನಲ್ಲಿ ಯದುವೀರಗೆ ಆರತಕ್ಷತೆ ನಡೆಯಲಿದೆ. ಈ ಸಂದರ್ಭದಲ್ಲಿ ಇಡೀ ಅರಮನೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದೆ. ಅಲ್ಲದೆ, ಕರ್ನಾಟಕ ಸಂಗೀತವನ್ನು ಪೊಲೀಸ್ ಬ್ಯಾಂಡ್ ನುಡಿಸಲಿದೆ.
ಪಟ್ಟಾಭಿಷೇಕ ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳ ರಾಜವಂಶಸ್ಥರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಚಿವರಾದ ಶ್ರೀನಿವಾಸ್ ಪ್ರಸಾದ್, ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ರಾಜಕಾರಣಿಗಳು ಭಾಗವಹಿಸಿದ್ದರು.