ನವದೆಹಲಿ : ಬಿಸಿಲಿನ ಝಳ ತಾಳಲಾರದೆ ದೇಶದಲ್ಲಿ ಸಾವಿರಾರು ಮಂದಿ ಸಾವನ್ನಪ್ಪುತ್ತಿರುವುದಕ್ಕೆ ಅಪಾಯಕಾರಿ ಅತಿನೇರಳೆ ಕಿರಣ (ಅಲ್ಟ್ರಾವಯಲೆಟ್)ದ ಪಾತ್ರವೂ ಕಾರಣ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಒಂದು ನಿರ್ದಿಷ್ಟ ಸಮಯ ಹಾಗೂ ನಿರ್ದಿಷ್ಟ ತಾಣದಲ್ಲಿ ಬೀಳುವ ಸೂರ್ಯನ ಕಿರಣಗಳ ಸಾಮರ್ಥ್ಯ ಅಳೆಯಲು ಅಲ್ಟ್ರಾವಯಲೆಟ್ ಇಂಡೆಕ್ಸ್ ಅಥವಾ ಅತಿನೇರಳೆ ವಿಕಿರಣ ಸೂಚ್ಯಂಕವನ್ನು ತಜ್ಞರು ಅವಲಂಬಿಸುತ್ತಾರೆ. ಸಾಮಾನ್ಯವಾಗಿ ಈ ಸೂಚ್ಯಂಕ ಶೂನ್ಯದಿಂದ 11ರವರೆಗೆ ಇರುತ್ತದೆ. ಆದರೆ ದೇಶದಲ್ಲಿ ಬಿಸಿಲಿನಿಂದ ಸಾವು ಸಂಭವಿಸುತ್ತಿರುವ ರಾಜ್ಯಗಳಲ್ಲಿ ಈ ಸೂಚ್ಯಂಕ 12ರ ಗಡಿ ಮುಟ್ಟಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳಿವೆ.
ಸೂಚ್ಯಂಕ ಹೆಚ್ಚಿದಷ್ಟೂ ಮಾನವನ ದೇಹಕ್ಕೆ ಅಪಾಯ ಹೆಚ್ಚು. ಹೀಗಾಗಿ ಸೂಚ್ಯಂಕ 12 ಅಂಕ ದಾಖಲಿಸಿರುವುದು ತಾಪಮಾನ ಹೊಡೆತ ಹಾಗೂ ಇನ್ನಿತರೆ ಚರ್ಮ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಸಂಸ್ಥೆ ಹೇಳಿದೆ. ಅಲ್ಲದೆ ಮುಂದಿನ ಕೆಲವು ವಾರಗಳ ಕಾಲ ದೇಶದ ಕೆಲವು ರಾಜ್ಯಗಳಲ್ಲಿ ಸೂಚ್ಯಂಕ 12ರ ಗಡಿಯಲ್ಲೇ ಇರಲಿದೆ ಎಂದು ಎಚ್ಚರಿಸಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅತಿನೇರಳೆ ವಿಕಿರಣ ಪ್ರಮಾಣ 12ರ ಆಸುಪಾಸಿನಲ್ಲಿದ್ದರೆ, ದೆಹಲಿಯಲ್ಲಿ 8.6, ಪುಣೆಯಲ್ಲಿ 8.6ರಷ್ಟು ಪ್ರಮಾಣ ದಾಖಲಾಗಿದೆ. ಹೀಗಾಗಿ ಮುಂದಿನ ಕೆಲ ದಿನಗಳ ಕಾಲ ಇದೇ ರೀತಿಯಲ್ಲಿ ಉಷ್ಣಾಂಶವೂ ಹೆಚ್ಚಾಗಿ, ಅತಿನೇರಳೆ ವಿಕಿರಣದ ಪ್ರಭಾವವೂ ಹೆಚ್ಚಿದ್ದರೆ, ಇನ್ನಷ್ಟು ಸಾವು-ನೋವಿನ ಭೀತಿ ಎದುರಾಗಿದೆ.
ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಅತಿನೇರಳೆ ಕಿರಣಗಳ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಇದು ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಿದೆ. ಮಂಗಳವಾರ ದೆಹಲಿಯಲ್ಲಿ ಯುವಿ ಪ್ರಮಾಣ 8.2 ಇತ್ತು, ಬುಧವಾರ ಇದು 8.2ರಷ್ಟು ದಾಖಲಾಗಿದೆ. ಇನ್ನು ಪುಣೆಯಲ್ಲಿ ಯುವಿ ಪ್ರಮಾಣ 8.9ರಷ್ಟು ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಹುತೇಕ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಕೆಲ ಭಾಗಗಳಲ್ಲಿ ಬಿರುಬಿಸಿಲು ಮುಂದುವರೆದಿದೆ. ಕಳೆದ ಕೆಲ ದಿನಗಳಲ್ಲಿ ದೇಶಾದ್ಯಂತ ಬಿರುಬಿಸಿಲಿಗೆ ಬಲಿಯಾದವರ ಸಂಖ್ಯೆ 1412ಕ್ಕೆ ಏರಿದೆ. ಇದರಲ್ಲಿ ಅತಿ ಹೆಚ್ಚೆಂದರೆ ಆಂಧ್ರಪ್ರದೇಶದ 1020 ಜನ ಮತ್ತು ತೆಲಂಗಾಣದ 340 ಜನ ಇದ್ದಾರೆ. ಮಂಗಳವಾರದಿಂದ ಈಚೆಗೆ ತೆಲಂಗಾಣವೊಂದರಲ್ಲೇ 74 ಜನ ಬಿಸಿಲಿನ ಹೊಡೆತ ತಾಳಲಾಗದೇ ಅಸುನೀಗಿದ್ದಾರೆ.