ಜಮ್ಮು : ಭಾರತದ ವ್ಯವಹಾರಗಳಲ್ಲಿ ನೆರೆಯ ಪಾಕಿಸ್ತಾನ ಮೂಗು ತೂರಿಸುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಜಮ್ಮುವಿನಲ್ಲಿ ನಡೆದ ಜನ್ ಕಲ್ಯಾಣ್ ಪರ್ವ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನ ತನ್ನ ದೇಶದ ಅಭಿವೃದ್ಧಿ ಬಯಸುವುದೇ ಆದಲ್ಲಿ, ಮೊದಲು ಅದು ಬೇರೆ ದೇಶಗಳ ವ್ಯವಹಾರಗಳಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಬೇಕು. ಅಲ್ಲದೇ ಭಾರತವನ್ನು ಗುರಿಯಾಗಿರಿಸಿ ನಡೆಸುವ ಎಲ್ಲಾ ಕಾನೂನು ಬಾಹಿರ ಚಟುವಟಿಕೆಯನ್ನು ನಿಲ್ಲಿಸಬೇಕೆಂದು ಹೇಳಿದರು.
ಯಾರು ಭಾರತದ ಪ್ರತಿಷ್ಠೆ, ಏಕತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುತ್ತಾರೋ ಅಂತಹವರಿಗೆ ತಕ್ಕ ಪ್ರತ್ಯುತ್ತರ ಕೊಡುವುದಾಗಿ ಸಿಂಗ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ನಾವು ನಮ್ಮ ಆರ್ಮಿಯನ್ನು ನಂಬುತ್ತೇವೆ, ನಮ್ಮ ಅರೆಸೇನಾ ಪಡೆ, ನಮ್ಮ ಸೇನಾ ಪಡೆ ಮೇಲೆ ಪೂರ್ಣ ವಿಶ್ವಾಸವಿದೆ. ಅವರ ಏಕತೆ ಮತ್ತು ದೇಶಪ್ರೇಮವನ್ನು ಪ್ರಶ್ನೆ ಮಾಡುವಂತಿಲ್ಲ ಎಂದು ದೇಶದ ಮಿಲಿಟರಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಪಾಕಿಸ್ತಾನ ಸೇರಿದಂತೆ ಎಲ್ಲಾ ನೆರೆ ದೇಶದ ಜೊತೆ ಭಾರತ ತನ್ನ ಸ್ನೇಹ ಹಸ್ತವನ್ನು ಮುಂದುವರಿಸುತ್ತದೆ. ಆದರೆ ಪಾಕಿಸ್ತಾನ ಯಾವಾಗಲೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.