ನವದೆಹಲಿ : ದೇಶದ ಹಲವು ರಾಜ್ಯಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಕೇಂದ್ರ ಹವಾಮಾನ ಇಲಾಖೆ, 4 ರಾಜ್ಯಗಳಲ್ಲಿ ರೆಡ್ ಬಾಕ್ಸ್ ಅಲರ್ಟ್ ಘೋಷಿಸಿದೆ. ಈ ಮೂಲಕ ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಭಾರೀ ಬಿಸಿಲಿಗೆ ಕಳೆದ 15 ದಿನಗಳ ಅವಧಿಯಲ್ಲಿ 1000ಕ್ಕೂ ಹೆಚ್ಚು ಜನ ಬಲಿಯಾದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಈ ಸೂಚನೆ ನೀಡಿದೆ.
ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ ಹಾಗೂ ಉತ್ತರದ ಹಲವು ರಾಜ್ಯಗಳು ಬಿಸಿಲ ಝಳಕ್ಕೆ ತತ್ತರಿಸಿವೆ. ಭಾನುವಾರದಿಂದೀಚೆಗೆ ಬಿಸಿಲ ಹೊಡೆತಕ್ಕೆ ಆಂಧ್ರ ಮತ್ತು ತೆಲಂಗಾಣದಲ್ಲಿ 1118 ಜನ ಸಾವನ್ನಪ್ಪಿದ್ದು, ಇದರೊಂದಿಗೆ ದೇಶದ ಇತರೆ ಭಾಗಗಳಲ್ಲೂ ಸುಡುಬಿಸಿಲು ಮತ್ತು ಬಿಸಿಗಾಳಿಗೆ 50ಕ್ಕೂ ಹೆಚ್ಚು ಜನ ಬಲಿಯಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 1168 ತಲುಪಿದೆ.
ಆಂಧ್ರಪ್ರದೇಶವೊಂದರಲ್ಲೇ ಬಿಸಿಲಿಗೆ 852 ಮಂದಿ ಬಲಿಯಾಗಿದ್ದಾರೆ. ಈ ಪೈಕಿ ಭಾನುವಾರದಿಂದೀಚೆಗೆ 606 ಜನ ಸಾವನ್ನಪ್ಪಿದ್ದಾರೆ. ಇನ್ನು ತೆಲಂಗಾಣದ ಬಹುತೇಕ ಭಾಗಗಳಲ್ಲೂ ಬಿಸಿಗಾಳಿ ಹೊಡೆತ ಮುಂದುವರೆದಿದ್ದು, ಭಾನುವಾರದಿಂದೀಚೆಗೆ 80 ಜನ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಬಿಸಿಲಿಗೆ ಬಲಿಯಾದವರ ಸಂಖ್ಯೆ 266ಕ್ಕೆ ತಲುಪಿದೆ.
ಇನ್ನು ಉತ್ತರ ಭಾರತ ಕೂಡ ಬಿಸಿಲಿನಿಂದ ತತ್ತರಿಸಿದ್ದು, ಉತ್ತರ ಪ್ರದೇಶದ ಬಮೌಲಿಯಲ್ಲಿ 47 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದೆ. ದೆಹಲಿಯಲ್ಲಿ ತಾಪಮಾನ 45 ಡಿಗ್ರಿಯನ್ನು ತಲುಪಿದೆ. ಆಂಧ್ರ ಪ್ರದೇಶದ ಜಂಗಮೇಶ್ವರಂನಲ್ಲಿ 46 ಡಿಗ್ರಿ ಸೆಲ್ಸಿಯಸ್ ಮತ್ತು ತೆಲಂಗಾಣದ ರಾಮಗುಂಡಮ್ ನಲ್ಲಿ ಗರಿಷ್ಠ 44.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮುಂದಿನ 4-5 ದಿನಗಳಲ್ಲಿ ಬಿಸಿಲ ಝಳ ಆಂಧ್ರ ಪ್ರದೇಶ, ಒಡಿಶಾ, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಹರ್ಯಾಣ, ಛತ್ತೀಸ್ ಗಢ, ದೆಹಲಿಯಲ್ಲಿ ಮುಂದುವರಿಯಲಿದೆ.
ವಾತಾವರಣದ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಿದರೆ ’ರೆಡ್ ಬಾಕ್ಸ್' ಎಚ್ಚರಿಕೆ ನೀಡಲಾಗುತ್ತದೆ. ಈ ಪರಿಸ್ಥಿತಿಯಲ್ಲಿ ಜನತೆ ಹೀಟ್ ಸ್ಟ್ರೋಕ್ ಗೆ ತುತ್ತಾಗುವುದು ಮತ್ತು ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಜನರ ಸಾವಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಸಿಲು ಹೆಚ್ಚಾದಾಗ ನೇರವಾಗಿ ಬಿಸಿಲಿಗೆ ಮೈ ಒಡ್ಡದಂತೆ, ದೇಹದ ಉಷ್ಣಾಂಶ ಕಾಪಾಡಿಕೊಳ್ಳಲು ಹೆಚ್ಚು ದ್ರವಾಹಾರ ಸೇವಿಸುವಂತೆ ಸೂಚಿಸಲು ಈ ರೀತಿಯಲ್ಲಿ ವಾರ್ನಿಂಗ್ ನೀಡಲಾಗುತ್ತದೆ.
ಈ ಬಾರಿಯ ಬೇಸಿಗೆಯಲ್ಲಿ ಮುಂಗಾರು ಪೂರ್ವ ಮಳೆಯ ಕೊರತೆ ಮತ್ತು ಚಂಡಮಾರುತಗಳು ಉಂಟಾಗದೇ ಇರುವುದು ಬಿಸಿಲಿನ ಪ್ರಮಾಣದಲ್ಲಿನ ಏರಿಕೆಗೆ ಕಾರಣವಾಗಿದೆ.