ನವದೆಹಲಿ : ದೆಹಲಿ ಉಪರಾಜ್ಯಪಾಲ ನಜೀಬ್ ಜಂಗ್ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಡುವೆ ಐಎಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಯ ಹಕ್ಕಿಗಾಗಿ ನಡೆದಿರುವ ಜಟಾಪಟಿಯಲ್ಲಿ, ಕೇಂದ್ರ ಸರ್ಕಾರ ಅಧಿಕೃತವಾಗಿ ಜಂಗ್ ಅವರ ಪರವಹಿಸಿದೆ.
ಶನಿವಾರ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಪ್ರಕಟಿಸಿದ್ದು, ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ, ಸೇವಾ ಕ್ಷೇತ್ರ ಮತ್ತು ದೆಹಲಿಯಲ್ಲಿ ಭೂಮಿಯ ವಿಚಾರದಲ್ಲಿ ಉಪರಾಜ್ಯಪಾಲರ ಮಾತೇ ಅಂತಿಮ. ಬೇಕೆಂದರೆ ಅವರು ಮುಖ್ಯಮಂತ್ರಿಯ ಸಲಹೆ ಕೇಳಬಹುದು ಅಥವಾ ಬಿಡಬಹುದು. ಅದು ಉಪರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿದೆ. ಈ ಮೂಲಕ ಅಧಿಕಾರಿಗಳ ನೇಮಕದಲ್ಲಿ ಜಂಗ್ ಅವರ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದೆ.
ಎಲ್ಲಿ ಶಾಸಕಾಂಗಕ್ಕೆ ಅಧಿಕಾರ ಇಲ್ಲವೋ, ಅಲ್ಲಿ ಕಾರ್ಯನಿರ್ವಾಹಕ ಅಧಿಕಾರವೂ ಇರುವುದಿಲ್ಲ. ಇವರೆಡೂ ಒಂದರಲ್ಲಿ ಒಂದು ಅಡಕವಾಗಿರುವಂಥದ್ದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದಲ್ಲದೆ ದೆಹಲಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಕೇಂದ್ರ ಸರ್ಕಾರಿ ಅಧಿಕಾರಿಗಳು, ನೌಕರರ ಮೇಲೆ ಕ್ರಮ ಕೈಗೊಳ್ಳಲು ಯಾವುದೇ ಅಧಿಕಾರವಿಲ್ಲ ಎಂದು ಅಧಿಸೂಚನೆ ತಿಳಿಸಿದೆ. ಈ ಹಿಂದೆ 1998ರಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆ ಈ ಹೊಸ ನೋಟಿಫಿಕೇಶನ್ ನಿಂದ ರದ್ದಾಗಿದೆ.
ಕೇಂದ್ರದ ಅಧಿಸೂಚನೆಯನ್ನು ಬ್ರಿಟಿಷ್ ಆಡಳಿತದಲ್ಲಿ ಹೊರಡಿಸಲಾಗುತ್ತಿದ್ದ ಅಧಿಸೂಚನೆಗಳಿಗೆ ಕೇಜ್ರಿವಾಲ್ ಹೋಲಿಸಿದ್ದಾರೆ. ಅಲ್ಲದೆ, ಮೋದಿ ಸರ್ಕಾರ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷ್ ಸರ್ಕಾರವಿದ್ದಾಗ ವೈಸ್ ರಾಯಿಗಳಿಗೆ ಲಂಡನ್ ನಿಂದ ಅಧಿಸೂಚನೆಗಳು ಬರುತ್ತಿದ್ದವು. ಈಗ ನಜೀಬ್ ಜಂಗ್ ವೈಸ್ ರಾಯಿ ಮತ್ತು ನರೇಂದ್ರ ಮೋದಿ ಲಂಡನ್ ಇದ್ದಂತೆ ಎಂದು ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ. ಈ ಅಧಿಸೂಚನೆಯು ದೆಹಲಿಯಲ್ಲಿ ಜನಾದೇಶವನ್ನು ಅವಮಾನಿಸುವಂತಿದೆ ಎಂದು ಅವರು ಹೇಳಿದ್ದಾರೆ.
ಈ ನಡುವೆ ಕೇಂದ್ರ ಸರ್ಕಾರದ ಅಧಿಸೂಚನೆ, ಜನರಿಂದ ಆಯ್ಕೆಯಾದ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸುವಂತಿದೆ ಎಂದು ಕಾಮಗ್ರೆಸ್, ಸಿಪಿಎಂ ಆಕ್ರೋಶ ವ್ಯಕ್ತಪಡಿಸಿವೆ.