ನವದೆಹಲಿ : ಕೇಂದ್ರದಲ್ಲಿ ಮೋದಿ ಸರಕಾರ ಮೇ 26ಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸರಕಾರದ ಸಾಧನೆಗಳನ್ನು ಮತ್ತು ನೀತಿಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೇಟ್ಲಿ, ಹೊಸ ದೃಷ್ಟಿಕೋನದಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ. ನಾವು ಭಾರತವನ್ನು ಉದ್ಯಮ ಸ್ನೇಹಿ ದೇಶವನ್ನಾಗಿ ಮಾಡುವ ಮತ್ತು ಆರ್ಥಿಕ ಪ್ರಗತಿ ಸಾಧಿಸುವ ಭರವಸೆಯನ್ನು ಈಡೇರಿಸುವತ್ತ ಹೆಜ್ಜೆ ಇಡುತ್ತಿರುವುದಾಗಿ ಹೇಳಿದ್ದಾರೆ.
ಭಷ್ಟಾಚಾರ ಮುಕ್ತವಾದ ಆಡಳಿತವನ್ನು ಕಳೆದ ಒಂದು ವರ್ಷದಿಂದ ಕೊಟ್ಟಿದ್ದೇವೆ, ಇದೊಂದು ಪ್ರಮುಖವಾದ ಅಂಶವಾಗಿದ್ದು, ರಾಜಕೀಯ ಭ್ರಷ್ಟಾಚಾರದಿಂದ ಜನಸಾಮಾನ್ಯರಿಗೆ ಮುಕ್ತಿ ದೊರಕಿದಂತಾಗಿದೆ, ಇದೊಂದು ನಮ್ಮ ಸರಕಾರದ ಸಾಧನೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಜೇಟ್ಲಿ, ಕಾಂಗ್ರೆಸ್ ಅಭಿವೃದ್ಧಿ ವಿರೋಧಿ ಧೋರಣೆ ಹೊಂದಿದೆ. ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ತನ್ನ ಪ್ರಗತಿ ವಿರೋಧಿ ನಡೆಯನ್ನು ಹೊರಹಾಕಿದೆ ಎಂದು ಆರೋಪಿಸಿದರು.
ದೇಶದ ಮೂಲಭೂತ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸುವುದಾಗಿ ಹೇಳಿದ ಅವರು, ಕೇಂದ್ರ ಸರ್ಕಾರ ಜಿಎಸ್ ಟಿ ಮತ್ತು ಭೂಸ್ವಾಧೀನ ಮಸೂದೆ ಜಾರಿಗೆ ಬದ್ಧವಾಗಿರುವುದಾಗಿ ತಿಳಿಸಿದರು. ಒಂದು ವರ್ಷದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ (ಶೇ.7.5.8) ಹೆಚ್ಚಳವಾಗಿದೆ. ಇದು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಆಡಳಿತಾರೂಢ ಎನ್ ಡಿಎ ಕೇಂದ್ರ ಸರ್ಕಾರ ಬೆಳವಣಿಗೆ ಮತ್ತು ಅಭಿವೃದ್ಧಿ ಪರವಾಗಿದೆ. ತೆರಿಗೆ ನೀತಿಯಿಂದಾಗಿ ಯಾವುದೇ ವಿವಾದ ಸೃಷ್ಟಿಯಾಗಿಲ್ಲ. ನಮ್ಮ ಸರ್ಕಾರ ಎಲ್ಲಾ ನಿರ್ಧಾರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕೈಗೊಳ್ಳುತ್ತದೆ ಎಂದು ಅರುಣ್ ಜೇಟ್ಲಿ ಹೇಳಿದರು.
ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ತನ್ನ ಮೊದಲ ವರ್ಷದ ಸಂಭ್ರಮಾಚರಣೆಗೆ ಹಾಗೂ ತನ್ನ ಸಾಧನೆಗಳನ್ನು ಜನರಿಗೆ ತಲಿಪಿಸಲು ದೇಶವ್ಯಾಪಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.