ಬೆಂಗಳೂರು : ಮುಖ್ಯಮಂತ್ರಿ ಸಹಿತ ಸಚಿವರು, ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರ ವೇತನ, ಇತರ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದ ಮಸೂದೆಗೆ ರಾಜ್ಯಪಾಲರ ಅಂಕಿತ ದೊರಕಿದ್ದು, ಈ ಕಾಯ್ದೆ ಜಾರಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಪರಿಷ್ಕೃತ ವೇತನ ಹೆಚ್ಚಳ 2015 ಎಪ್ರಿಲ್ ನಿಂದ ಪೂರ್ವಾನ್ವಯವಾಗಲಿದೆ. ಇದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲ ಸಂಬಳ 30 ಸಾವಿರ ರೂ.ನಿಂದ 50 ಸಾವಿರ ರೂ.ಗೆ ಹೆಚ್ಚಲಿದೆ. ಸಂಪುಟ ಸಚಿವರ ಸಂಬಳ 25 ಸಾವಿರ ರೂ.ನಿಂದ 40 ಸಾವಿರ ರೂ.ಗೆ, ರಾಜ್ಯ ಸಚಿವರ ಸಂಬಳ 16 ಸಾವಿರ ರೂ. ನಿಂದ 35 ಸಾವಿರ ರೂ. ತಲುಪಲಿದೆ. ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ವೇತನ 20 ಸಾವಿರ ರೂ. ನಿಂದ 25 ಸಾವಿರ ರೂ. ತಲುಪಲಿದೆ.
ವೇತನದ ಜತೆಗೆ ಇತರ ಭತ್ಯೆಗಳು ಸೇರಿ ಶಾಸಕರಿಗೆ ಮಾಸಿಕ 1.40 ಲಕ್ಷ ರೂ.ವರೆಗೆ ದೊರೆಯಲಿದೆ. ಸಚಿವರು, ಸ್ಪೀಕರ್, ಉಪಾಧ್ಯಕ್ಷ, ಸಭಾಪತಿ, ಉಪ ಸಭಾಪತಿ, ವಿಪಕ್ಷ ನಾಯಕರಿಗೆ ವೇತನದ ಜತೆಗೆ ಅತಿಥಿ ಭತ್ಯೆ, ಪೆಟ್ರೋಲ್ ಭತ್ಯೆ, ತೋಟದ ನಿರ್ವಹಣೆ ಭತ್ಯೆ ಪ್ರತ್ಯೇಕವಾಗಿ ಲಭಿಸಲಿದೆ. ಸರಕಾರದಿಂದ ವಸತಿ ವ್ಯವಸ್ಥೆ ಕಲ್ಪಿಸದಿದ್ದರೆ ಮನೆ ಬಾಡಿಗೆ ಭತ್ಯೆ ಸಹ ಸಿಗಲಿದೆ.