ನವದೆಹಲಿ : ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಿನ ಸಮರ ತಾರಕಕ್ಕೇರಿದೆ. ಆಡಳಿತಾರೂಢ ಎಎಪಿ ಸರ್ಕಾರ ಕಳೆದ ನಾಲ್ಕು ದಿನಗಳಲ್ಲಿ ನೇಮಕ ಮಾಡಿದ್ದ ಅಧಿಕಾರಿಗಳ ವರ್ಗಾವಣೆಯನ್ನು ಲೆಫ್ಟಿನೆಂಟ್ ಗವರ್ನರ್ ಜಂಗ್ ಬುಧವಾರ ರದ್ದುಪಡಿಸಿದ್ದಾರೆ. ಏತನ್ಮಧ್ಯೆ ಗವರ್ನರ್ ಮತ್ತು ಎಎಪಿ ನಡುವಿನ ಹಣಾಹಣಿ ಮಧ್ಯೆ ಪ್ರವೇಶಿಲು ಕೇಂದ್ರ ಸರ್ಕಾರ ನಿರಾಕರಿಸಿದೆ.
ಕೇಜ್ರಿವಾಲ್ ಗೆ ಜಂಗ್ ಬರೆದಿರುವ ಪತ್ರದಲ್ಲಿ, ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿ ಮಾಡಲು ಸಂವಿಧಾನಾತ್ಮಕ ಹಕ್ಕು ಮಾತ್ರ ಇರುವುದಾಗಿ ತಿಳಿಸಿದ್ದಾರೆ. ಆ ಹಕ್ಕಿನ ಮೂಲಕ ಸ್ಟೆನೋದಿಂದ ಹಿಡಿದು ಐಎಎಸ್ ಅಧಿಕಾರಿಗಳವರೆಗೆ ನೇಮಕಾತಿ ಮತ್ತು ವರ್ಗಾವಣೆ ಮಾಡುವ ಅಧಿಕಾರ ಇರುವುದಾಗಿ ಪತ್ರದಲ್ಲಿ ತಿರುಗೇಟು ನೀಡಿದ್ದಾರೆ.
ಅಧಿಕಾರಿಗಳ ನೇಮಕ, ವರ್ಗಾವಣೆ ವಿಚಾರವಾಗಿ ಅರವಿಂದ್ ಕೇಜ್ರಿವಾಲ್ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೂಡಾ ರಾಷ್ಟ್ರಪತಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಅಧಿಕಾರಿಗಳ ವರ್ಗಾವಣೆ, ನೇಮಕಾತಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ನಡೆಯುತ್ತಿರುವ ಹಣಾಹಣಿ ನಡುವೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ವಿವಾದದಲ್ಲಿ ಕೇಂದ್ರ ಸರ್ಕಾರ ಏನೂ ಮಾಡಲು ಆಗಲ್ಲ. ಹೊಂದಾಣಿಕೆಯಿಂದ ಆಡಳಿತ ನಡೆಸಬೇಕು ಎಂದು ಕೇಂದ್ರ ಸರ್ಕಾರ ಸಂದೇಶ ರವಾನಿಸಿದೆ.
ನಾವು ಮಧ್ಯಪ್ರವೇಶಿಸಲ್ಲ; ರಾಜನಾಥ್ ಸಿಂಗ್
ಗೃಹ ಸಚಿವ ರಾಜನಾಥ್ ಸಿಂಗ್ ರಾಷ್ಟ್ರಪತಿಯವರನ್ನು ಭೇಟಿಯಾಗಿದ್ದು, ದೆಹಲಿ ಬೆಳವಣಿಗೆ ಕುರಿತು ಚರ್ಚಿಸಲು ಎಂದೇ ಹೇಳಲಾಗಿತ್ತು. ಆದರೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೆಹಲಿ ಜಟಾಪಟಿ ಬಗ್ಗೆ ರಾಷ್ಟ್ರಪತಿಯೊಡನೆ ಯಾವುದೇ ಚರ್ಚೆ ನಡೆಸಿಲ್ಲ. ದೆಹಲಿ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸಲ್ಲ ಎಂದು ತಿಳಿಸಿದ್ದಾರೆ.