ನವದೆಹಲಿ : 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ವಿರುದ್ಧ ಸುಪ್ರೀಂಕೋರ್ಟ್ ಕಿಡಿಕಾರಿದ್ದು, ಹಗರಣ ಕುರಿತಂತೆ ರಂಜಿತ್ ಸಿನ್ಹಾ ಅವರು ಮೊದಲು ತಮ್ಮನ್ನು ತಾವು ತನಿಖೆಗೊಳಪಡಿಸಿಕೊಳ್ಳಬೇಕು ಎಂದು ಹೇಳಿದೆ.
ಹಗರಣದ ಆರೋಪಿಗಳನ್ನು ಚಾರ್ಜ್ ಶೀಟ್ ಸಲ್ಲಿಸುವ ಮೊದಲೇ ರಂಜಿತ್ ಸಿನ್ಹಾ, ಅವರನ್ನು ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಅಧಿಕಾರದ ದುರುಪಯೋಗ ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಸಿನ್ನಾ ವಿರುದ್ಧ ಅಗತ್ಯವಾಗಿ ತನಿಖೆ ನಡೆಸಬೇಕು ಎಂದು ನಿರ್ದೇಶನ ನೀಡಿದೆ.
ದೇಶಾದ್ಯಂತ ತೀವ್ರ ವಿವಾದ ಹುಟ್ಟುಹಾಕಿದ್ದ 2ಜಿ ಸ್ಪೆಕ್ಟ್ರಂ ಹಗರಣದ ತನಿಖೆಯನ್ನು ಸಿನ್ನಾ ನೇತೃತ್ವದಲ್ಲೇ ನಡೆಯುತ್ತಿತ್ತು. ಈ ಸಂದರ್ಭದಲ್ಲಿ 2 ಜಿ ತರಂಗಾಂತರ ಪ್ರಕರಣದ ಆರೋಪಿಯೊಬ್ಬರು ಸಿನ್ನಾ ಅವರನ್ನು ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರೆಂದು ಆರೋಪಿಸಿ ಪ್ರಶಾಂತ್ ಭೂಷಣ್ ನೇತೃತ್ವದ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಎಂಬ ಎನ್ ಜಿಒ ಸುಪ್ರೀಂಗೆ ದೂರು ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸಿನ್ನಾ ತಮ್ಮ ವೃತ್ತಿಯಿಂದ ನಿವೃತ್ತಿಯಾಗಲು ಕೆಲವೇ ದಿನ ಇರುವಾಗಲೇ 2 ಜಿ ತನಿಖೆಯಿಂದ ರಂಜಿತ್ ಸಿನ್ನಾ ದೂರ ಉಳಿಯುವಂತೆ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಸಿಬಿಐ ಮುಖ್ಯಸ್ಥರಾಗಿದ್ದ ರಂಜಿತ್ ಸಿನ್ನಾ ಡಿಸೆಂಬರ್ ನಲ್ಲಿ ನಿವೃತ್ತಿಯಾಗಿದ್ದರು.