ಹೈದ್ರಾಬಾದ್ : ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ತುಂಬಲು ರೈತರ ವಿಷಯ ಕೈಗೆತ್ತಿಕೊಂಡು ದೇಶಾದ್ಯಂತ ಪ್ರವಾಸ ಕೈಗೊಂಡಿರುವ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ, 2 ದಿನ ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ.
ಇದೇ ವೇಳೆ ಜಿಲ್ಲೆಯಲ್ಲಿ 15 ಕಿ.ಮೀ ಪಾದಯಾತ್ರೆ ನಡೆಸಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯದ ಬಗ್ಗೆ ಅದ್ಧೂರಿ ಪ್ರಚಾರ ಕೈಗೊಂಡ ಹೊರತಾಗಿಯೂ ಕಾಂಗ್ರೆಸ್ ಇಲ್ಲಿ ಸೋಲನುಭವಿಸಿತ್ತು. ಅದರ ನಂತರದ ರಾಹುಲ್ ರ ಮೊದಲ ಭೇಟಿ ಇದಾಗಿದೆ.
ರಾಹುಲ್, ಗುರುವಾರ ಸಂಜೆ 4 ಗಂಟೆಗೆ ಒಸ್ಮಾನಿಯಾ ವಿ.ವಿ ಯಲ್ಲಿ ವಿದ್ಯಾರ್ಥಿಗಳೊಂದಿಗೆ ಉದ್ಯೋಗದ ಕುರಿತು ಸಂವಾದ ನಡೆಸಲಿದ್ದಾರೆ. ನಿರ್ಮಲ್ ನಗರದಲ್ಲಿ ರಾತ್ರಿ ಕಳೆಯಲಿರುವ ರಾಹುಲ್, ಶುಕ್ರವಾರ ಮುಂಜಾನೆ 7 ಗಂಟೆಗೆ ವಡಿಯಾಲ ಗ್ರಾಮದಿಂದ ಪಾದಯಾತ್ರೆ ಆರಂಭಿಸಲಿದ್ದಾರೆ.
ಈ ವೇಳೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳನ್ನು ರಾಹುಲ್ ಭೇಟಿ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಕೊರಟಿಕಲ್ ಎಂಬ ಗ್ರಾಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.