BW News Bureau : ಬೆಂಗಳೂರು ಪೂರ್ವ ವಲಯದ ಇಂದಿರಾನಗರದಲ್ಲಿರುವ ಪ್ರಮುಖ ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್ ಹಾಗೂ ವ್ಯಾಯಾಮ ಶಾಲೆಗಳಿಗೆ ಅನಿರೀಕ್ಷಿತ ದಾಳಿ ನಡೆಸಿರುವ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು 6 ಉದ್ದಿಮೆಗಳಿಗೆ ಬೀಗ ಜಡಿದು, ಒಟ್ಟು 7 ಉದ್ದಿಮೆಗಳಿಗೆ 6.45 ಲಕ್ಷ ದಂಡ ವಿಧಿಸಿದ್ದಾರೆ.
ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಅವರ ಸೂಚನೆಯಂತೆ ಪೂರ್ವ ವಲಯದ ಮುಖ್ಯ ಆರೋಗ್ಯಾಧಿಕಾರಿ ಡಾ.ಸವಿತಾ ಅವರ ನೇತೃತ್ವದಲ್ಲಿ ಇಂದಿರಾನಗರ 12ನೇ ಮುಖ್ಯರಸ್ತೆಯ ವಾಣಿಜ್ಯ ಉದ್ದಿಮೆಗಳನ್ನು ಪರಿಶೀಲಿಸಲಾಯಿತು. ಈ ವೇಳೆ 9 ಉದ್ದಿಮೆಗಳು ಬಿಬಿಎಂಪಿ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಮೊದಲಿಗೆ ಗೋಲ್ಡ್ ಜಿಮ್ ವ್ಯಾಯಾಮ ಶಾಲೆ ಪರಿಶೀಲನೆ ನಡೆಸಿದ ಅಧಿಕಾರಿಗಳು, ಉದ್ದಿಮೆಯು ಪರವಾನಗಿ ಪ್ರಮಾಣ ಪತ್ರ ಹಾಜರುಪಡಿಸುವಂತೆ ಸೂಚಿಸಿದರು. ಆದರೆ, ಪ್ರಮಾಣಪತ್ರ ಹಾಜರುಪಡಿಸಲು ಗೋಲ್ಡ್ ಜಿಮ್ ವ್ಯವಸ್ಥಾಪಕರು ವಿಫಲರಾದರು. ಅಲ್ಲದೆ, ಇಲ್ಲಿ ಉತ್ಪಾದನೆಯಾಗುತ್ತಿರುವ ಘನ ತ್ಯಾಜ್ಯವನ್ನು ಪಾದಚಾರಿ ರಸ್ತೆಯಲ್ಲಿ ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೆಎಂಸಿ ಕಾಯ್ದೆ-1976 ಹಾಗೂ ಎಂ.ಎಸ್.ಡಬ್ಲೂ ನಿಯಮಗಳ ಉಲ್ಲಂಘನೆ ಮಾಡಿರುವ ಉದ್ದಿಮೆಗೆ ಬೀಗಮುದ್ರೆ ಹಾಕಿ 1 ಲಕ್ಷ ರೂ. ದಂಡ ವಿಧಿಸಲಾಗಿದೆ.
ಇದೇ ವೇಳೆ ’ಕೋಸ್ಟಾ ಕಾಫಿ' ಮಳಿಗೆ ಎದುರು ಬಾಟಲ್ ಗಳನ್ನು ಬಿಸಾಡಿದ್ದು ಕಂಡುಬಂತು. ಅಲ್ಲಿ ಕಸ ಹಾಕಲು ಡಸ್ಟ್ ಬಿನ್ ಸಹ ಇಟ್ಟಿರಲಿಲ್ಲ. ಜತೆಗೆ ಪರವಾನಗಿ ಪ್ರಮಾಣಪತ್ರ ಪ್ರದರ್ಶಿಸಿರಲಿಲ್ಲ. ಪ್ರಮಾಣಪತ್ರ ಹಾಜರುಪಡಿಸುವಂತೆ ಅಧಿಕಾರಿಗಳು ಸೂಚಿಸಿದರೂ ಅಲ್ಲಿದ್ದವರು ಪ್ರಮಾಣ ಪತ್ರ ನೀಡಲು ವಿಫಲರಾದರು. ಅಲ್ಲದೆ, ಮಾಲ್ಟೋಸ್ ಅಗ್ರಿ ಇಂಡಸ್ಟ್ರೀಸ್ ಮೂಲಕ ಕಸ ವಿಲೇವಾರಿ ಮಾಡುವುದಾಗಿ ಒಡಂಬಡಿಕೆ ಮಾಡಿಕೊಂಡಿದ್ದ ಕೋಸ್ಟಾ ಕಾಫಿ ಮಳಿಗೆ ಅನಧಿಕೃತವಾಗಿ ವೆಂಕಟೇಶ್ವರ ಎಂಟರ್ ಪ್ರೈಸಸ್ ಮೂಲಕ ಕಸ ವಿಲೇವಾರಿ ಮಾಡುತ್ತಿರುವುದು ಬೆಳಕಿಗೆ ಬಂತು. ಹೀಗಾಗಿ, ಮೂರು ಕಾಯ್ದೆಗಳ ಉಲ್ಲಂಘನೆ ಮಾಡಿರುವ ಉದ್ದಿಮೆಗೆ ಬೀಗ ಜಡಿದು 2 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಡಾ.ಸವಿತಾ ತಿಳಿಸಿದ್ದಾರೆ.
ಇದಲ್ಲದೆ, ಪರವಾನಗಿ ಹಾಜರುಪಡಿಸದ "ಮದರ್ ಕ್ಲಕ್ಕರ್ಸ್ ಬಾರ್ ಅಂಡ್ ರೆಸ್ಟೋರೆಂಟ್'ಗೆ 2 ಲಕ್ಷ ರೂ. ದಂಡ ವಿಧಿಸಿ ಬೀಗ ಮುದ್ರೆ ಹಾಕಲಾಗಿದೆ. ಕೊನಾರ್ಕ್ ರೆಸ್ಟೋರೆಂಟ್ ಉದ್ದಿಮೆ ವೈದ್ಯಕೀಯ ಪ್ರಮಾಣಪತ್ರ ಪಡೆದಿಲ್ಲ. ಅಡುಗೆ ಕೋಣೆ ಗಲೀಜಾಗಿತ್ತು. ಜತೆಗೆ ಪರವಾನಗಿ ಪತ್ರವನ್ನೂ ಹಾಜರುಪಡಿಸಿಲ್ಲ. ಈ ಹಿನ್ನೆಲೆಯಲ್ಲಿ 20 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಟೋಪಾಜ್ ಬಾರ್ ಅಂಡ್ ರೆಸ್ಟೋರೆಂಟ್ ಆವರಣದಲ್ಲಿ ಒಳ ಚರಂಡಿ ಮಾರ್ಗ ಸೋರಿಕೆಯಾಗಿ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಬದಲಾಗಿದೆ. ಜತೆಗೆ ಧೂಮಪಾನ ಮಾಡುವ ಜಾಗ ವಿಂಗಡಿಸದೆ "ಕಾಟಾ³' ಕಾಯ್ದೆ ಉಲ್ಲಂಘಿಸಲಾಗಿದೆ. ಹೀಗಾಗಿ ಇವರಿಗೆ 50 ಸಾವಿರ ರೂ. ದಂಡ ವಿಧಿಸಿರು ವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. "ವಾಟ್ ದ ಎಫ್' ಬಾರ್ ಅಂಡ್ ರೆಸ್ಟೋರೆಂಟ್ ಬಿಬಿಎಂಪಿ ಆರೋಗ್ಯ ಇಲಾಖೆಯ ಪರವಾನಗಿ ಪಡೆಯದೆ ಅನಧಿಕೃತವಾಗಿ ನಡೆಸುತ್ತಿರುವ ಕಾರಣ 25 ಸಾವಿರ ರೂ. ದಂಡ ವಿಧಿಸಿ ಬೀಗ ಮುದ್ರೆ ಹಾಕಲಾಗಿದೆ.
ಇಂದಿರಾನಗರದ ನಂದಿನಿ ಹೋಟೆಲ್ ನ ಅಡುಗೆ ಮನೆ ಗಲೀಜಾಗಿದ್ದನ್ನು ಗಮನಿಸಿದ ಅಧಿಕಾರಿಗಳು ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಅಡುಗೆ ಮನೆಯಲ್ಲಿ ಕಸದ ರಾಶಿ ಬಿದ್ದಿದ್ದನ್ನು ಕಂಡ ಅಧಿಕಾರಿಗಳು ವೈದ್ಯಕೀಯ ಪ್ರಮಾಣಪತ್ರ ನೀಡುವಂತೆ ಸೂಚಿಸಿದರು. ಪ್ರಮಾಣಪತ್ರ ಹಾಜರುಪಡಿಸಲು ವಿಫಲರಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೋಟೆಲ್ ಉದ್ದಿಮೆ ಪರವಾನಗಿ ರದ್ದುಪಡಿಸಲಾಯಿತು.