ನವದೆಹಲಿ : ನೆರೆ ರಾಷ್ಟ್ರ ನೇಪಾಳ ಹಾಗೂ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆಗಳಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ಮಧ್ಯಾಹ್ನ 12.35ಸುಮಾರಿಗೆ ಈ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ನೇಪಾಳದ ಹಲವೆಡೆಗಳಲ್ಲಿ ಮತ್ತೆ ಪ್ರಬಲ ಭೂಕಂಪ ಉಂಟಾಗಿದೆ. ನೇಪಾಳದ ಕಠ್ಮಂಡುವಿನಿಂದ 83 ಕಿ.ಮೀ ದೂರದಲ್ಲಿರುವ ಕೊಡಾರಿಯಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದ್ದು, ಸುಮಾರು 60 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 7.4ರಷ್ಟು ತೀವ್ರತೆ ದಾಖಲಾಗಿದೆ. ಭೂಮಿಯ ಮೇಲ್ಮೈನಿಂದ ಸುಮಾರು 19 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ.
ಜಾರ್ಖಂಡ್, ಉತ್ತರ ಪ್ರದೇಶ, ಅಸ್ಸಾಂ,ಪಶ್ಚಿಮ ಬಂಗಾಳ, ಛತ್ತೀಸ್ ಗಢ, ಪಂಜಾಬ್, ಓಡಿಶಾ, ರಾಜಸ್ಥಾನ ಮತ್ತು ದೆಹಲಿಯ ಹಲವೆಡೆಗಳಲ್ಲಿ ಭೂಕಂಪನದ ಅನುಭವವಾಗಿದೆ.
ಉತ್ತರಭಾರತದ ರಾಜ್ಯಗಳಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಭೂಕಂಪದ ಅನುಭವದಿಂದ ಆತಂಕಕ್ಕೊಳಗಾದ ಜನರು, ಮನೆ, ಅಪಾರ್ಟ್ ಮೆಂಟ್, ಕಛೇರಿ, ಕಟ್ಟಡಗಳಿಂದ ಹೊರಗೋಡಿ ಬಂದಿದ್ದಾರೆ.
ಇನ್ನು ಮುಂಜಾಗೃತಾ ಕ್ರಮವಾಗಿ ದೆಹಲಿ, ಕೋಲ್ಕತ್ತಾದಲ್ಲಿ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಏ.27ರಂದು ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 7ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು.
ಇತ್ತೀಚಿನ ಮಾಹಿತಿ ಪ್ರಕಾರ ನೇಪಾಳದಲ್ಲಿ ಭೂಕಂಪಕ್ಕೆ 19 ಜನರು ಬಲಿಯಾಗಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಇನ್ನು ಬಿಹಾರದಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಮಧ್ಯೆ ಭೂಕಂಪದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಪಡೆದುಕೊಂಡಿದ್ದು, ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ತಕ್ಷಣ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.