ನವದೆಹಲಿ : ಪದ್ಮಪ್ರಶಸ್ತಿ ಪಡೆಯಲು ದೊಡ್ಡ ಮಟ್ಟದ ಲಾಬಿ ನಡೆಸಲಾಗುತ್ತಿದೆ. ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ವ್ಯಕ್ತಿಗಳು ಈ ಪದ್ಮಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳುವ ಮೂಲಕ ಯೋಗ ಗುರು ಬಾಬಾ ರಾಮ್ ದೇವ್ ವಿವಾದಕ್ಕೆ ಗುರಿಯಾಗಿದ್ದಾರೆ.
ರಾಜಕೀಯ ಪ್ರಭಾವ ಬಳಸಿ ಪದ್ಮ ಪ್ರಶಸ್ತಿ ಗಿಟ್ಟಿಸಿಕೊಳ್ತಾರೆ ಎಂದಿರುವ ರಾಮ್ ದೇವ್, ನನಗೆ ಪದ್ಮ ಪ್ರಶಸ್ತಿ ಬಗ್ಗೆ ಗೌರವವಿದೆ. ಪದ್ಮಭೂಷಣದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಒಳ್ಳೆಯ ಜನರಿಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ರಾಮ್ ದೇವ್ ಈ ರೀತಿ ಹೇಳಿಕೆ ನೀಡುವ ಮೂಲಕ ಪದ್ಮ ಪ್ರಶಸ್ತಿ ವಿಜೇತರನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ವರ್ಷದ ಆರಂಭದಲ್ಲಿ ಪದ್ಮಪ್ರಶಸ್ತಿಗೆ ಆಯ್ಕೆಯಾದ ಸಂದರ್ಭದಲ್ಲಿ ಬಾಬಾ ರಾಮದೇವ್ ಅವರು ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು, ಒಬ್ಬ ಸನ್ಯಾಸಿಯಾಗಿ ನಾನು ಪ್ರಶಸ್ತಿ, ಪುರಸ್ಕಾರಗಳಿಂದ ದೂರ ಇರಬೇಕಾಗುತ್ತದೆ. ನನ್ನ ಬದಲಿಗೆ ಬೇರೆ ಅರ್ಹರೊಬ್ಬರನ್ನು ಆಯ್ಕೆ ಮಾಡಿ ಎಂದು ಹೇಳಿದ್ದರು.