ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಬದಲಾವಣೆಯ ರಾಜಕೀಯ ಮಾಡಬೇಕೆ ವಿನ: ದ್ವೇಷ ರಾಜಕಾರಣ ಅಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ತಮ್ಮ ಕ್ಷೇತ್ರವಾದ ಅಮೇಠಿಯಲ್ಲಿನ ಫುಡ್ ಪಾರ್ಕ್ ಸ್ಥಾಪನೆ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದರ ವಿರುದ್ಧ ಕಿಡಿಕಾರಿದರು.
ಸಾರ್ವತ್ರಿಕ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಅಮೇಠಿಯಲ್ಲಿ ಸುಮಾರು 52 ನಿಮಿಷಗಳ ಭಾಷಣ ಮಾಡಿದ್ದರು. ಅವರ ಮಾತಿನಲ್ಲಿ ಇದ್ದದ್ದು ಬದಲಾವಣೆಯದ್ದು ಹೊರತಾಗಿ ದ್ವೇಷದ್ದಾಗಿರಲಿಲ್ಲ. ಅವರ ಭಾಷಣ ಕೇಳಿ ನನಗೂ ಖುಷಿಯಾಗಿತ್ತು. ಆದರೆ ಅವರು ಈಗ ಮಾಡಿದ್ದೇನು ಎಂದು ರಾಹುಲ್ ಖಾರವಾಗಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಧಿಕಾರದಲ್ಲಿದ್ದಾಗ ಅಮೇಠಿಗೆ ಫುಡ್ ಪಾರ್ಕ್ ಸ್ಥಾಪನೆಗೆ ಅನುಮೋದನೆ ಸಿಕ್ಕಿತ್ತು. ಆದರೆ ಮೋದಿ ಸರ್ಕಾರ ಅದಕ್ಕೆ ಅನುಮತಿ ನೀಡದೆ ರದ್ದು ಮಾಡಿದೆ ಎಂದರು.