ಬೆಂಗಳೂರು : ಡಿನೋಟಿಫಿಕೇಷನ್ ಉರುಳು ಮತ್ತೆ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಸುತ್ತ ಸುತ್ತಿಕೊಂಡಿದ್ದು, ಲೋಕಾಯುಕ್ತ ಪೊಲೀಸರು ಈ ಇಬ್ಬರೂ ನಾಯಕರ ವಿರುದ್ಧ ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರ ಬಳಿ ಇರುವ ಮಠದಹಳ್ಳಿ ಲೇಔಟ್ ಪ್ರದೇಶದಲ್ಲಿ 1 ಎಕರೆ 11 ಗುಂಟೆ ಜಮೀನು ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ ನೀಡಿದ ದೂರಿನ ಮೇರೆಗೆ ಎಫ್.ಐ.ಆರ್ ದಾಖಲಿಸಿಕೊಳ್ಳಲಾಗಿದೆ. ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ.
ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕುಮಾರಸ್ವಾಮಿ ಸಂಬಂಧಿಕರಾದ ವಿಮಲಾ, ಟಿ.ಎಸ್.ಚನ್ನಪ್ಪ, ನಕಲಿ ಮಾಲೀಕ ಎಂದು ಹೇಳಲಾದ ರಾಜಶೇಖರಯ್ಯ ಹಾಗೂ ಸಂಬಂಧಪಟ್ಟ ಇತರೆ ಅಧಿಕಾರಿಗಳ ವಿರುದ್ಧವು ಸಹ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ 13(1)ಸಿ, 13(1)ಡಿ, 13(2) ಮತ್ತು ಐಪಿಸಿ 409, 418, 420 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ನಾರಂಗ್ ತಿಳಿಸಿದ್ದಾರೆ.
ಮಠದಹಳ್ಳಿ ವ್ಯಾಪ್ತಿಯ ಸರ್ವೇನಂ 7/1ಬಿ, 7/1ಸಿ ಮತ್ತು 7/1ಡಿ ವ್ಯಾಪ್ತಿಯಲ್ಲಿ 1 ಎಕರೆ 11ಗುಂಟೆ ಜಮೀನನ್ನು ಯಡಿಯೂರಪ್ಪಸಿಎಂ ಆಗಿದ್ದಾಗ ಕಾನೂನು ಬಾಹಿರವಾಗಿ ಡಿನೋಟಿಫೈ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಾಗಪ್ಪ ಮತ್ತು ಮುನಿಸ್ವಾಮಪ್ಪ ಎಂಬುವವರು ವಾರಸುದಾರರಾಗಿದ್ದರು. ಆದರೆ, ರಾಜಾಜಿನಗರದ ರಾಜಶೇಖರಯ್ಯ ಎಂಬುವವರು ಈ ಜಮೀನಿನ ಮಾಲೀಕರು ಎಂದು ಹೇಳಿಕೊಂಡು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು 2007ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು, ಕಾನೂನುಬದ್ಧವಾಗಿ ಡಿ-ನೊಟೀಫಿಕೇಷನ್ ಮಾಡುವಂತೆ ಸರ್ಕಾರದ ಜಂಟಿ ಕಾರ್ಯದರ್ಶಿಗೆ ಸೂಚಿಸಿದ್ದರು. ಈ ನಡುವೆ 2008ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬಳಿಕ ಯಡಿಯೂರಪ್ಪ ಸಿಎಂ ಆದರು. ಅವರು 2010ರಲ್ಲಿ ಡಿ-ನೋಟಿಫೀಕೇಷನ್ ಮಾಡಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.