ಮುಂಬೈ : ನಟ ಸಲ್ಮಾನ್ ಖಾನ್ ವಿರುದ್ಧದ 2002ರ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸೆಷನ್ಸ್ ನ್ಯಾಯಾಲಯ ಬುಧವಾರ ತನ್ನ ತೀರ್ಪನ್ನು ಪ್ರಕಟಿಸಿದ್ದು, ಸಲ್ಮಾನ್ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿದ್ದು, ಸಲ್ಮಾನ್ ಖಾನ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಡಬ್ಲ್ಯೂ. ದೇಶಪಾಂಡೆ ತೀರ್ಪು ಪ್ರಕಟಿಸಿದ್ದು, ಸಲ್ಮಾನ್ ಖಾನ್ ಕುಡಿದು ವಾಹನ ಚಲಾಯಿಸುತ್ತಿರುವುದು ಸಾಬೀತಾಗಿದೆ. ಅತಿ ವೇಗ, ಅಜಾಗರುಕತೆಯಿಂದ ಕಾರು ಚಲಾಯಿಸಿರುವುದೇ ಘಟನೆಗೆ ಕಾರಣ ಎಂದು ಹೇಳಿದ್ದಾರೆ. ಅಲ್ಲದೇ ಐದು ವರ್ಷ ಜೈಲುಶಿಕ್ಷೆ, 25 ಸಾವಿರ ರೂಪಾಯಿ ದಂಡ ವಿಧಿಸಿಲಾಗಿದೆ.
ಈ ಹಿನ್ನಲೆಯಲ್ಲಿ ಸಲ್ಮಾನ್, ಉದ್ದೇಶರಹಿತ ಮಾನವ ಹತ್ಯೆ ಅಪರಾಧಿಯಾಗಿದ್ದು, 10 ವರ್ಷ ಜೈಲುಶಿಕ್ಷೆಯಾಗುವ ಸಾಧ್ಯತೆಯಿದೆ. 13 ವರ್ಷಗಳ ಸುದೀರ್ಘ ವಿಚಾರಣೆ ಕಂಡ ಈ ಪ್ರಕರಣ ಅನೇಕ ತಿರುವುಗಳನ್ನು ಪಡೆದುಕೊಂಡಿದ್ದು, ತೀರ್ಪು ಭಾರೀ ಕುತೂಹಲ ಮೂಡಿಸಿತ್ತು.
ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಬಾಂದ್ರಾ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್, 2012ರಲ್ಲಿ ಸಲ್ಮಾನ್ ಖಾನ್ ವಿರುದ್ಧ ಉದ್ದೇಶಪೂರ್ವಕವಲ್ಲದ ಹತ್ಯೆಯ ಗಂಭೀರ ಆರೋಪವನ್ನು ಹೊರಿಸಿದ್ದರು. ಅಲ್ಲದೆ, ಈ ಪ್ರಕರಣವನ್ನು ಸೆಷನ್ಸ್ ಕೋರ್ಟ್ನಲ್ಲಿ ಮರು ವಿಚಾರಣೆ ನಡೆಸುವಂತೆಯೂ ಸೂಚಿಸಿದ್ದರು. ಬಳಿಕ ಸೆಷನ್ಸ್ ಕೋರ್ಟ್ನಲ್ಲಿ ಪ್ರಕರಣದ ಮರು ವಿಚಾರಣೆ ನಡೆಸಲಾಗಿತ್ತು.
2002ರ ಸೆ.28ರಂದು ಬಾಂದ್ರಾ ಹೊರವಲಯದ ಬೇಕರಿಯೊಂದರ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದವರ ಮೇಲೆ ನಸುಕಿನ ವೇಳೆಯಲ್ಲಿ ಕಾರು ಹತ್ತಿಸಿ ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾದ ಆರೋಪವನ್ನು ಸಲ್ಮಾನ್ ಎದುರಿಸುತ್ತಿದ್ದಾರೆ. ಆದರೆ, ಈ ಘಟನೆ ನಡೆದ ಸಂದರ್ಭದಲ್ಲಿ ತಾವು ಕಾರನ್ನು ಓಡಿಸುತ್ತಿರಲಿಲ್ಲ. ಬದಲಾಗಿ ತಮ್ಮ ಚಾಲಕ ಅಶೋಕ್ ಸಿಂಗ್ ಕಾರನ್ನು ಚಲಾಯಿಸುತ್ತಿದ್ದರು ಎಂದು ಸಲ್ಮಾನ್ ಖಾನ್ ವಿಚಾರಣೆಯ ವೇಳೆ ಹೇಳಿಕೊಂಡಿದ್ದರು. ಅಶೋಕ್ ಸಿಂಗ್ ತಾವೇ ಕಾರು ಓಡಿಸಿದ್ದಾಗಿ ಕೋರ್ಟ್ನಲ್ಲಿ ಹೇಳಿಕೆಯನ್ನೂ ನೀಡಿದ್ದರು.
ಅಲ್ಲದೆ, ಸಲ್ಮಾನ್ ಖಾನ್ ಪರ ವಕೀಲರು ಪ್ರಕರಣಕ್ಕೆ ಇನ್ನೊಂದು ತಿರುವು ನೀಡಿ, ಕಾರಿನ ಟೈರ್ ಸ್ಫೋಟಗೊಂಡು ಕಾರು ಅಪಘಾತಕ್ಕೀಡಾಗಿತ್ತು. ಈ ವೇಳೆ ಕ್ರೇನ್ ನಿಂದ ಎಸ್.ಯು.ವಿ ಕಾರನ್ನು ಮೇಲೆತ್ತುವಾಗ ಅದು ಪಾದಚಾರಿ ಮಾರ್ಗದ ಮೇಲೆ ಮಲಗಿದ್ದವರ ಮೇಲೆ ಬಿದ್ದು ಅವರು ಗಂಭೀರವಾಗಿ ಗಾಯೊಂಡಿದ್ದರು. ಇದರಿಂದಾಗಿ ವ್ಯಕ್ತಿಯೊಬ್ಬನ ಸಾವು ಸಂಭವಿಸಿದೆ ಎಂದು ವಾದಿಸಿದ್ದರು.