ನವದೆಹಲಿ : ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಭೂಗತ ಪಾತಕಿ 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಇರುವ ಸ್ಥಳದ ಕುರಿತು ಧ್ವಂದ್ವ ನಿಲುವು ಪ್ರದರ್ಶಿಸುವ ಮೂಲಕ ಕೇಂದ್ರ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದೆ.
ದಾವೂದ್ ಎಲ್ಲಿದ್ದಾನೆ ಎಂಬ ಕುರಿತು ಸರ್ಕಾರಕ್ಕೆ ಮಾಹಿತಿ ಇಲ್ಲ ಎಂದು ಗೃಹ ಖಾತೆ ರಾಜ್ಯ ಸಚಿವರ ಪೈಕಿ ಒಬ್ಬರಾದ ಹರಿಭಾಯ್ ಚೌಧರಿ ಅವರು ಲೋಕಸಭೆಗೆ ಮಾಹಿತಿ ನೀಡಿದರೆ, ಇದಾದ ಕೆಲವೇ ಗಂಟೆಗಳಲ್ಲಿ ಮತ್ತೂಬ್ಬ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು, ದಾವೂದ್ ಪಾಕ್ ನಲ್ಲೇ ಇದ್ದು, ಆತನ ಹಸ್ತಾಂತರಕ್ಕೆ ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಉಭಯ ಸಚಿವರ ಈ ಹೇಳಿಕೆಗೆ ಸಚಿವಾಲಯದ ಸಿಬ್ಬಂದಿ ಎಡವಟ್ಟು ಕಾರಣ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬುಧವಾರ ಸದನದಲ್ಲಿ ಸೂಕ್ತ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.
ದಾವೂದ್ ಪಾಕಿಸ್ತಾನ ಸೇನೆ ಆಶ್ರಯದಲ್ಲಿ ಆ ದೇಶದಲ್ಲೇ ಇದ್ದಾನೆ ಎಂದು ಇಲ್ಲಿವರೆಗೂ ಹೇಳಿಕೊಂಡು ಬಂದಿದ್ದ ಕೇಂದ್ರ ಸರ್ಕಾರ ಈಗ ಉಲ್ಟಾ ಹೊಡೆದಿದೆ. ದಾವೂದ್ ಇರುವ ಜಾಗ ಈವರೆಗೂ ಪತ್ತೆಯಾಗಿಲ್ಲ ಎಂದು ಹೊಸ ವಾದ ಆರಂಭಿಸಿದೆ. ಬಿಹಾರದ ಬಿಜೆಪಿ ಲೋಕಸಭಾ ಸದಸ್ಯ ನಿತ್ಯಾನಂದ ರಾಯ್ ಅವರು ದಾವೂದ್ ಕುರಿತು ಕೇಳಿದ ಪ್ರಶ್ನೆಗೆ ಲಿಖೀತ ಉತ್ತರ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ಹರಿಭಾಯ್ ಪಾರ್ಥಿಭಾಯ್ ಚೌಧರಿ ಅವರು, ಈವರೆಗೂ ದಾವೂದ್ ಇರುವ ಸ್ಥಳ ಗೊತ್ತಾಗಿಲ್ಲ. ಆತ ಇರುವ ಸ್ಥಳ ಗೊತ್ತಾದ ಬಳಿಕ ಗಡೀಪಾರು ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.
1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಆರೋಪಿಯಾಗಿರುವ ದಾವೂದ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದ್ದು, ಅದಿನ್ನೂ ಅಸ್ತಿತ್ವದಲ್ಲಿದೆ. ಆತನ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೂಡ ವಿಶೇಷ ನೋಟಿಸ್ ಜಾರಿ ಮಾಡಿದೆ ಎಂದು ತಿಳಿಸಿದ್ದಾರೆ.