ನವದೆಹಲಿ : ಅಪಘಾತಗಳನ್ನು ತಪ್ಪಿಸಿ ರಸ್ತೆಗಳನ್ನು ಹೆಚ್ಚು ಸುರಕ್ಷಿತ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಅಕ್ಟೋಬರ್ 1ರಿಂದ ಬಸ್, ಲಾರಿ, ಟ್ರಕ್, ಡಂಪರ್, ಮಿನಿ ಲಾರಿ, ಮಿನಿ ಬಸ್ ಮತ್ತತಿರ ಎಲ್ಲ ಹೊಸ ವಾಣಿಜ್ಯ ವಾಹನಗಳಿಗೆ ತಾಸಿಗೆ ಗರಿಷ್ಠ 80 ಕಿ. ಮೀ.ವೇಗಮಿತಿ ಖಾತರಿಪಡಿಸುವ ಸ್ಪೀಡ್ ಗವರ್ನರ್ ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದೆ.
ಹೊಸ ವಾಹನಗಳು ಅ.1ರಿಂದ ಸ್ಪೀಡ್ ಗವರ್ನರ್ ಗಳೊಂದಿಗೆ ರಸ್ತೆಗಿಳಿಯಬೇಕು. ಹಳೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಿಕೊಳ್ಳಲು ಮುಂದಿನ ವರ್ಷ ಏಪ್ರಿಲ್ 1ರ ತನಕ ಸಮಯಾವಕಾಶ ಇದೆ. ಹೊಸ ವಾಹನ ಗಳಿಗೆ ಉತ್ಪಾದಕರು ಅಥವ ಡೀಲರ್ ಗಳು ಸ್ಪೀಡ್ ಗವರ್ನರ್ ಅಳವಡಿಸ ಬೇಕೆಂದು ಅಧಿಸೂಚನೆಯಲ್ಲಿ ತಿಳಿಸ ಲಾಗಿದೆ. ಇದೇ ವೇಳೆ ಶಾಲಾ ಬಸ್, ಡಂಪರ್ ಮತ್ತು ಗ್ಯಾಸ್, ತೈಲ ಮತ್ತಿತರ ಅಪಾಯಕಾರಿ ಸರಕುಗಳನ್ನು ಸಾಗಿಸುವ ವಾಹನಗಳಿಗೆ ತಾಸಿಗೆ 60 ಕಿ. ಮೀ. ಗರಿಷ್ಠ ವೇಗಮಿತಿ ನಿಗದಿಗೊಳಿಸಲಾಗಿದೆ.
ಪೊಲೀಸ್, ಅಗ್ನಿಶಾಮಕ ಪಡೆಯ ವಾಹನಗಳು, ಆಯಂಬುಲೆನ್ಸ್ ಮತ್ತು 9 ಆಸನಗಳ ವಾಹನಗಳಿಗೆ ಗರಿಷ್ಠ ವೇಗಮಿತಿ ಇಲ್ಲ. ಹೀಗಾಗಿ ಅವುಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವ ಅಗತ್ಯವಿಲ್ಲ. ಹಳೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿ ಸುವ ಕುರಿತು ರಾಜ್ಯ ಸರಕಾರಗಳು ಅಧಿಸೂಚನೆ ಹೊರಡಿಸಬೇಕೆಂದು ಕೇಂದ್ರ ಸಾರಿಗೆ ಸಚಿವಾಲಯ ಸೂಚಿಸಿದೆ.
ಶೇ. 27 ಅಪಘಾತಗಳು ಘನ ವಾಹನಗಳಿಂದ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ವಾಣಿಜ್ಯ ಬಳಕೆಯ ವಾಹನಗಳ ವೇಗಕ್ಕೆ ಮಿತಿ ಹೇರಲು ನಿರ್ಧರಿಸಿದೆ. ವಾಹನ ಅಪಘಾತ ಸಂಭವಿಸಲು ಮುಖ್ಯ ಕಾರಣ ಅತಿಯಾದ ವೇಗ ಎನ್ನುವುದು ಜಗತ್ತಿನಾದ್ಯಂತ ಸಾಬೀತಾಗಿದೆ. ಹೀಗಾಗಿ ಅಮಾಯಕ ಜನರ ಪ್ರಾಣ ಉಳಿಸಲು ವಾಹನಗಳ ವೇಗಕ್ಕೆ ತಡೆ ಹಾಕುವುದು ಅನಿವಾರ್ಯ ಎಂದು ಸಾರಿಗೆ ಸಚಿವಾಲಯ ಅಧಿಸೂಚನೆಯಲ್ಲಿ ಹೇಳಿದೆ.
ತಯಾರಿಕೆ ಹಂತದಲ್ಲೇ ವಾಹನಗಳ ವೇಗಮಿತಿಯನ್ನು ನಿಯಂತ್ರಿಸಲು ಮುಂದಾಗಿರುವುದು ಉತ್ತಮ ನಿರ್ಧಾರ. ಇದರಿಂದ ಎಲ್ಲ ರಾಜ್ಯಗಳಿಗೂ ಒಂದೇ ಮಾದರಿಯ ನಿಯಮ ಜಾರಿಯಲ್ಲಿದ್ದಂತಾಗುತ್ತದೆ. ರಸ್ತೆಗಿಳಿದ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆಗೆ ಮುಂದಾದರೆ ಹಲವು ರೀತಿಯ ಅಡೆತಡೆಗಳು ಬರುತ್ತಲೇ ಇರುತ್ತವೆ. ಇನ್ನು ವಾಹನಗಳ ವೇಗಕ್ಕೆ ಮಿತಿ ಇರಲೇಬೇಕಾಗುತ್ತದೆ. ಈ ದೃಷ್ಟಿಯಿಂದ ಇದು ಸ್ವಾಗತಾರ್ಹ ತೀರ್ಮಾನ.