ನವದೆಹಲಿ : 'ಬುದ್ಧ ಪೂರ್ಣಿಮೆ'ಯ ದಿನದಂದು ದೇಶದ ನಾಗರಿಕರಿಗೆ ಶುಭಾಷಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ನೇಪಾಳದ ಭೂಕಂಪದ ಸಂತ್ರಸ್ಥರನ್ನು ನೆನಪಿಸಿಕೊಂಡಿದ್ದಾರೆ.
ನವದೆಹಲಿಯ ತಾಳಕಟೋರ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ವಿಶೇಷ ದಿನ, ಆದರೂ ಮನಸ್ಸು ಭಾರವಾಗಿದೆ, ನಾವೆಲ್ಲ ಅತಿ ಹೆಚ್ಚು ಪ್ರೀತಿಸುವ ನೆಲೆ ನೇಪಾಳ ಸಂಕಷ್ಟ ಎದುರಿಸುತ್ತಿದೆ, ಆದ್ದರಿಂದ ಮನಸ್ಸಿಗೆ ನೋವುಂಟಾಗಿದೆ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಭೂಕಂಪದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಒಂದು ನಿಮಿಷ ಮೌನಾಚರಣೆ ಮಾಡಿದ್ದು, ನೇಪಾಳಕ್ಕೆ ಸಹಾಯ ಮಾಡುವ ಮೂಲಕ ಬುದ್ಧನ ಸಂದೇಶವನ್ನು ಪಾಲಿಸಬೇಕಿದೆ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.
ನೇಪಾಳದ ಹೆಮ್ಮೆಯ ಪುತ್ರರಲ್ಲಿ ಭಗವಾನ್ ಬುದ್ಧನೂ ಒಬ್ಬ, ಬುದ್ಧ ನಮಗೆಲ್ಲರಿಗೂ ಸಹಾನುಭೂತಿ ತೋರಿದ್ದಾರೆ, ನೇಪಾಳದಲ್ಲಿ ಭೂಕಂಪಕ್ಕೆ ಸಿಲುಕಿ ನರಳುತ್ತಿರುವವರ ಕಣ್ಣೀರು ಒರೆಸುವ ಮೂಲಕ ಬುದ್ಧನ ಸಂದೇಶಗಳನ್ನು ಪಾಲಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.