ನವದೆಹಲಿ : ರೈತರ ಸಮಸ್ಯೆ ಹಾಗೂ ನೆಟ್ ನ್ಯೂಟ್ರಾಲಿಟಿ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೀಗ ರಿಯಲ್ ಎಸ್ಟೇಟ್ ವಿಚಾರವನ್ನೂ ಕೈಗೆತ್ತಿಕೊಂಡು ಮಧ್ಯಮ ವರ್ಗದ ಮನಗೆಲ್ಲಲು ಮುಂದಾಗಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿಗಳ ಮೋಸದಾಟಕ್ಕೆ ಬಲಿಯಾಗಿರುವ ಜನತೆಯ ಪರ ನಿಲ್ಲುವುದಾಗಿ ಘೋಷಿಸಿದ್ದಾರೆ.
ರಾಷ್ಟ್ರ ರಾಜಧಾನಿ ವಲಯ (ಎನ್ಸಿಆರ್)ದ ಹಲವಾರು ಫ್ಲ್ಯಾಟ್ ಖರೀದಿದಾರರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಯುಪಿಎ ಸರ್ಕಾರ ಜಾರಿಗೆ ತಂದಿದ್ದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮಸೂದೆ ಖರೀದಿದಾರರ ಪರವಾಗಿತ್ತು. ಅದನ್ನು ಈಗ ಎನ್ಡಿಎ ಸರ್ಕಾರ ದುರ್ಬಲಗೊಳಿಸಿ ಬಿಲ್ಡರ್ಗಳ ಪರ ವಿಧೇಯಕವನ್ನಾಗಿಸಿದೆ. ರೈತರು ಹಾಗೂ ಬುಡಕಟ್ಟು ಜನರಷ್ಟೇ ಅಲ್ಲ, ಭೂಮಿ ವಿಚಾರದಲ್ಲಿ ಮಧ್ಯಮ ವರ್ಗದ ಜನರನ್ನೂ ಹತ್ತಿಕ್ಕಲಾಗುತ್ತಿದೆ ಎಂದು ಹರಿಹಾಯ್ದರು.
ಒಂದು ನಿರ್ದಿಷ್ಟ ದಿನ ಫ್ಲ್ಯಾಟ್ ಕೊಡುವುದಾಗಿ ಬಿಲ್ಡರ್ ಗಳು ಹೇಳುತ್ತಾರೆ. ಆದರೆ ಅಂದು ಫ್ಲ್ಯಾಟ್ ಸಿಗುವುದೇ ಇಲ್ಲ. ಸೂಪರ್ ಡೂಪರ್ ಏರಿಯಾ ಎಂದು ಹೇಳಿ ದೊಡ್ಡ ಫ್ಲ್ಯಾಟ್ ಸಿಗಲಿದೆ ಎಂದು ಆಸೆ ತೋರಿಸುತ್ತಾರೆ. ಆದರೆ ಫ್ಲ್ಯಾಟ್ ಕೈಗೆ ಬಂದಾಗ ಅದು ಬೇರೆಯದೇ ರೀತಿ ಇರುತ್ತದೆ. ಫ್ಲ್ಯಾಟ್ ನಿಂದ ನಿಂತು ನೋಡಿದರೆ ಒಳ್ಳೆಯ ನೋಟ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅಸಲಿಗೆ ಆ ಫ್ಲ್ಯಾಟ್ ಪಕ್ಕ ಒಂದು ಕಟ್ಟಡ ತಲೆ ಎತ್ತಿರುತ್ತದೆ. ಯಾವುದೇ ನೋಟವೂ ಇರುವುದಿಲ್ಲ ಎಂದು ವ್ಯಂಗ್ಯವಾಡಿದರು.
ಮೇ 5ರ ಮಂಗಳವಾರ ರಾಜ್ಯಸಭೆಯಲ್ಲಿ ರಿಯಲ್ ಎಸ್ಟೇಟ್ ವಿಧೇಯಕವನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ಯತ್ನಿಸುವ ಸಾಧ್ಯತೆ ಇದೆ. ಹೀಗಾಗಿ ರಾಹುಲ್ ಅವರು ಈ ವಿಚಾರವನ್ನು ಕೈಗೆತ್ತಿಕೊಂಡಿರುವುದು ಅತ್ಯಂತ ಮಹತ್ವದ್ದಾಗಿದೆ.
ಇದೇ ವೇಳೆ ಕೇಂದ್ರ ಮಾಜಿ ವಸತಿ ಹಾಗೂ ಬಡತನ ನಿರ್ಮೂಲನೆ ಸಚಿವರೂ ಆಗಿರುವ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಮಾತನಾಡಿ, ಯುಪಿಎ ಸರ್ಕಾರ ರೂಪಿಸಿದ್ದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ವಿಧೇಯಕಕ್ಕೆ ಎನ್ಡಿಎ ಸರ್ಕಾರ 18 ತಿದ್ದುಪಡಿಗಳನ್ನು ತಂದಿದೆ ಎಂದು ದೂರಿದರು.