ಚಂಡೀಗಢ : ಪಂಜಾಬ್ ನ ಮೊಗಾದಲ್ಲಿ 14 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ನಡೆಸಿದ ದುಷ್ಕರ್ಮಿಗಳು ತಾಯಿ-ಮಗಳನ್ನು ಬಸ್ನಿಂದ ಕೆಳಗೆಸೆದು ಬಾಲಕಿಯ ಸಾವಿಗೆ ಕಾರಣವಾದ ಘಟನೆಯ ಬಗ್ಗೆ ಶಿಕ್ಷಣ ಸಚಿವ ಸುರ್ಜಿತ್ ಸಿಂಗ್ ರಾಖ್ರಾ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.
ಆ ಹುಡುಗಿ ಆ ರೀತಿ ಮರಣಿಸಬೇಕೆಂಬುದು ವಿಧಿಲಿಖಿತವಾಗಿತ್ತು. ಎಲ್ಲವೂ ದೈವೇಚ್ಛೆಯಂತೆ ನಡೆದಿದೆ. ಈ ಘಟನೆ ಕೇವಲ ಆಕಸ್ಮಿಕ ಅಷ್ಟೇ ಪ್ರಕಾಶ್ ಸಿಂಗ್ ಬಾದಲ್ ಸರ್ಕಾರದ ಸಚಿವ ಸುರ್ಜಿತ್ ಸಿಂಗ್ ಹೇಳಿಕೆ ನೀಡಿದ್ದಾರೆ.
ದೇವರ ವಿರುದ್ದ ತಲೆ ಎತ್ತಿ ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಆ ಹುಡುಗಿ ಹಾಗೇ ಬಸ್ ನಿಂದ ಕೆಳಗೆಬಿದ್ದು ಸಾಯಬೇಕು. ಬಾಲಕಿಯ ತಾಯಿಗೆ ಗಾಯಗಳಾಗಿ ಆಸ್ಪತ್ರೆ ಸೇರಬೇಕು ಎಂಬುದೇ ದೇವರ ಇಷ್ಟವಾಗಿತ್ತು. ಅದಕ್ಕೆ ಹಾಗಾಗಿದೆ ಎಂದಿದ್ದಾರೆ.
ಆಡಳಿತ ಪಕ್ಷದ ಮತ್ತೊಬ್ಬ ಶಾಸಕ ಜೋಗೀಂದರ್ ಸಿಂಗ್ ಪಾಲ್ ಜೈನ್, ಇಂಥ ಎಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕಾಗಿ ಇಷ್ಟೊಂದು ರಂಪಾಟ ನಡೆಸುವುದು ಅನಗತ್ಯ. ಎಲ್ಲದಕ್ಕೂ ನಾವು ತಲೆ ಕೆಡಿಸಿಕೊಳ್ಳಲಾಗದು. ನಮಗೂ ಬೇರೆ ಕೆಲಸಗಳಿರುತ್ತವೆ ಎಂಬ ವೇದವಾಕ್ಯಗಳನ್ನು ಹರಿಯಬಿಟ್ಟಿದ್ದಾರೆ. ಸಚಿವ, ಶಾಸಕರ ಈ ಹೇಳಿಕೆಗಳಿಂದಾಗಿ ಪ್ರಕಾಶ್ ಸಿಂಗ್ ಬಾದಲ್ ರ ಅಕಾಲಿ ದಳ ಸರ್ಕಾರ ಈಗ ಭಾರೀ ಮುಜುಗರಕ್ಕೆ ಸಿಲುಕಿದೆ. ಈಹೇಳಿಕೆ ವಿರೋಧ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.