ನವದೆಹಲಿ : ಭಯೋತ್ಪಾದಕರು ಜೈಲಿನಲ್ಲಿ ತಮ್ಮೊಂದಿಗಿರುವ ಖೈದಿಗಳನ್ನು ಉಗ್ರವಾದ ನಡೆಸುವಂತೆ ಪ್ರಚೋದಿಸುತ್ತಿರುವುದು ಕಂಡುಬಂದಿದ್ದು, ಭಯೋತ್ಪಾದಕರಿಗಾಗಿಯೇ ಪ್ರತ್ಯೇಕ ಜೈಲು ವವಸ್ಥೆ ಮಾಡಬೇಕಿದೆ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಭಯೋತ್ಪಾದಕರು ಇತರ ಕ್ರಿಮಿನಲ್ ಅಪರಾಧಿಗಳನ್ನು ತಮ್ಮೊಂದಿಗೆ ಸೇರುವಂತೆ ಪ್ರಚೋದಿಸುತ್ತಿರುವ ಬಗ್ಗೆ ಕೇಂದ್ರದ ಭದ್ರತಾ ಸಂಸ್ಥೆಗಳು ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿವೆ. ಈ ಬೆನ್ನಲ್ಲೇ ಭಯೋತ್ಪಾದಕರಿಗೆ ಪ್ರತ್ಯೇಕ ಜೈಲು ವ್ಯವಸ್ಥೆ ಮಾಡುವಂತೆ ಆದೇಶ ಹೊರಡಿಸಲಾಗಿದೆ.
ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ ಶೀಘ್ರವೇ ಭಯೋತ್ಪಾದಕರನ್ನು ಇತರ ಕ್ರಿಮಿನಲ್ ಅಪರಾಧಿಗಳಿಂದ ದೂರವಿರಿಸಿ, ಭಯೋತ್ಪಾದಕರನ್ನು ಗಮನಿಸುವುದಕ್ಕಾಗಿಯೇ ಹೆಚ್ಚಿನ ಭದ್ರತೆ ಒದಗಿಸಿ ಎಂದು ಹೇಳಿದೆ. ಅಲ್ಲದೇ ಜೈಲಿನಲ್ಲಿ ಭಯೋತ್ಪಾದಕರ ಚಲನವಲನ ಹಾಗೂ ಇತರ ಖೈದಿಗಳೊಂದಿಗೆ ಮಾತನಾಡುವುದನ್ನು ಗಮನಿಸಿ ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ಜೈಲಿನಲ್ಲಿ ಮೊಬೈಲ್ ಜಾಮರ್, ಸಿಸಿಟಿವಿಗಳನ್ನು ಅಳವಡಿಸಿ ಉಗ್ರರ ಚಲನವಲಗಳನ್ನು ಗಮನಿಸುವುದಕ್ಕಾಗಿಯೇ ಜೈಲು ಸಿಬ್ಬಂದಿಗಳನ್ನು ನೇಮಿಸಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ.