BW News Bureau : ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿದೆ.
ಏ.30ರ ಸಂಜೆ ವೇಳೆ ಬೆಂಗಳೂರಿನ ಹಲವು ಪ್ರದೇಶಳಲ್ಲಿ ಮಳೆ ಸುರಿದಿದ್ದು, ಮಳೆಯ ಆರ್ಭಟಕ್ಕೆ ಬೃಹದಾಕಾರದ ಮರಗಳು ಧರೆಗುರುಳಿವೆ. ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು ವಾಹನ ದಟ್ಟಣೆ ಉಂಟಾಗಿದೆ. ಶಾಂತಿನಗರ, ಮಲ್ಯ ರಸ್ತೆ, ವಿಲ್ಸನ್ ಗಾರ್ಡನ್, ಸುಬ್ಬಯ್ಯ ಸರ್ಕಲ್, ಜಯನಗರ ಮುಂತಾದ ಪ್ರಮುಖ ಪ್ರದೇಶಗಳಲ್ಲಿ ಮರಗಳು ಉರುಳಿ ಬಿದ್ದಿವೆ.
ಮಲ್ಯ ಆಸ್ಪತ್ರೆಯ ಹಿಂಭಾಗದಲ್ಲೇ ಬೃಹತ್ ಗಾತ್ರದ ಮರ ಉರುಳಿರುವ ಪರಿಣಾಮ ಕಾರ್ಪೊರೇಷನ್, ರಿಚ್ ಮಂಡ್ ರಸ್ತೆ, ಹಲಸೂರು, ಎಂ.ಜಿ ರಸ್ತೆ ಮಾರ್ಗದಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಕೇವಲ 15-20 ನಿಮಿಷ ಸುರಿದ ಮಳೆಗೆ ಮರಗಳು ಉರುಳಿರುವುದಲ್ಲದೇ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು ದ್ವಿಚಕ್ರವಾಹನಗಳು ಭಾಗಶಃ ನೀರಿನಲ್ಲಿ ಮುಳುಗಿವೆ.
ಡಬಲ್ ರೋಡ್ ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆಯೇ ಮರ ಉರುಳಿ ಬಿದ್ದಿದ್ದು ಅವಘಡಗಳು ಸಂಭವಿಸಿರುವ ಬಗ್ಗೆ ಮಾಹಿತಿ ದೊರೆತಿಲ್ಲ. ನಗರದ ಹಲವೆಡೆ, ಚರಂಡಿ ನೀರು ರಸ್ತೆಗೆ ನುಗ್ಗಿದ್ದರೆ ಇನ್ನೂ ಹಲವೆಡೆ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿವೆ. ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಧರಾಶಾಯಿಯಾಗಿರುವ ಮರ, ವಿದ್ಯುತ್ ತಂತಿಗಳನ್ನು ತೆರವುಗೊಳಿಸುವಲ್ಲಿ ಬಿಬಿಎಂಪಿ ಸಿಬ್ಬಂದಿಗಳು ನಿರತರಾಗಿದ್ದಾರೆ.