ಬೆಂಗಳೂರು : ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯನ್ನು ವಿರೋಧಿಸಿ ಸರ್ಕಾರಿ ಸಾರಿಗೆ ಸಂಸ್ಥೆಗಳು ಕರೆ ನೀಡಿರುವ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಸ್ ಗಳು ಸಂಚರಿಸದೇ ಇರುವುದರಿಂದ ಪ್ರಯಾಣಿಕರು ತೊಂದರೆಗೊಳಗಾಗಿದ್ದು, ಕಚೇರಿಗಳಿಗೆ ತೆರಳುವ ನೌಕರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರಿನಲ್ಲಿ ಬಿ.ಎಂ.ಟಿ.ಸಿ ಬಸ್ ಗಳ ಸಂಚಾರವೂ ವ್ಯತ್ಯಯಗೊಂಡಿದ್ದು, ಕೆಲವು ಕಂಪನಿಗಳು ನೌಕರರಿಗಾಗಿ ಖಾಸಗಿ ಬಸ್ ವ್ಯವಸ್ಥೆ ಮಾಡಿವೆ. ಹಲವು ಮಂದಿ ಖಾಸಗಿ ಬಸ್ ಮೂಲಕವೇ ಕಚೇರಿಗೆ ತೆರಳುತ್ತಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಬಿ.ಎಂ.ಟಿ.ಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಬೆಂಗಳೂರು ಪಶ್ಚಿಮ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್, ಪ್ರಯಾಣಿಕರಿಗೆ ತೊಂದರೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಬಸ್ ಸಂಚಾರವನ್ನು ಪ್ರಾರಂಭಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಬಸ್ ಗಳಿಗೆ ಅನಾಹುತ ಉಂಟಾಗದಂತೆ ಸೂಕ್ತ ಭದ್ರತೆ ನೀಡುವುದಾಗಿಯೂ ಅಲೋಕ್ ಕುಮಾರ್ ಭರವಸೆ ನೀಡಿದ್ದಾರೆ. ಇನ್ನು ಬಂದ್ ಗೆ ಬೆಂಬಲ ನೀಡದೇ ಸಂಚರಿಸುತ್ತಿರುವ ಖಾಸಗಿ ಬಸ್ ಗಳ ಮೇಲೆ ಕಲ್ಲೆಸೆದ ಪ್ರಕರಣಗಳೂ ನಡೆದಿದೆ. ಹುಬ್ಬಳ್ಳಿಯಲ್ಲಿ ಬೇಂದ್ರೆ ಸಾರಿಗೆ ಮೇಲೆ ಕಲ್ಲೆಸದ ಪರಿಣಾಮ ಬಸ್ ನ ಗಾಜು ಪುಡಿಪುಡಿಯಾಗಿದೆ. ಮೈಸೂರಿನಲ್ಲಿ ನಗರ ಸಾರಿಗೆ ಮೇಲೆ ಕಲ್ಲೆಸೆಯಲಾಗಿದ್ದು, ಬಸ್ ನ ಹಿಂಬದಿಯ ಗಾಜು ಸಂಪೂರ್ಣ ಜಖಂಗೊಂಡಿದೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯಲ್ಲಿ ಕಠಿಣ ಅಂಶಗಳನ್ನು ಸೇರಿಸಲಾಗಿದ್ದು, ಮಸೂದೆ ಜಾರಿಯಾದರೆ ಚಾಲಕರಿಗೆ ಉಳಿಗಾಲವಿಲ್ಲ. ಆದ್ದರಿಂದ ಮಸೂದೆಯಲ್ಲಿನ ಕೆಲ ಅಂಶಗಳನ್ನು ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿ ಚಾಲಕರ ಸಂಘಟನೆ, ಕಾರ್ಮಿಕ ಸಂಘಟನೆ ಸೇರಿದಂತೆ ಹಲವು ಖಾಸಗಿ-ಸರ್ಕಾರಿ ಸಂಘಟನೆಗಳು ಏ.30ರಂದು ದೇಶವ್ಯಾಪಿ ಬಂದ್ ಗೆ ಕರೆ ನೀಡಿವೆ.