ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಕೈಗೊಂಡಿದ್ದ ಕೆನಡಾ ಪ್ರವಾಸದಲ್ಲಿ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಪ್ರಧಾನಿ ನರೇಂದ್ರ ಮೋದಿ ಟೋರಂಟೋದಲ್ಲಿ ಭಾಷಣ ಮಾಡುವಾಗ ಯುಪಿಎ ಸರ್ಕಾರ ಮಾಡಿರುವ ಕೊಳೆಯನ್ನು ನಾವು ತೊಳೆಯಲಿದ್ದೇವೆ ಎಂದು ಹೇಳಿದ್ದಕ್ಕೆ ಕೆಂಡಾಮಂಡಲರಾದ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಆನಂದ್ ಶರ್ಮಾ ಕೆನಡಾದಲ್ಲಿ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಮೋದಿ ಸ್ಕ್ಯಾಮ್ ಇಂಡಿಯಾ' ಹಣೆಪಟ್ಟಿಯನ್ನು ಕಳಚಿ 'ಸ್ಕಿಲ್ ಇಂಡಿಯಾ' ಎಂದು ಮಾಡುವೆ ಎಂದಿದ್ದರು. ಈ ಹೇಳಿಕೆಯಿಂದಾಗಿ ತಪ್ಪು ಸಂದೇಶ ರವಾನೆಯಾಗಲಿದ್ದು ಭಾರತಕ್ಕೆ ಪ್ರಧಾನಿ ನ್ರೇಂದ್ರ ಮೋದಿ ಅಪಮಾನ ಮಾಡಿದ್ದಾರೆ ಎಂದು ಆನಂದ್ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ಸಮಸ್ತ ಭಾರತೀಯರ ಪ್ರತಿನಿಧಿಯಾಗಿದ್ದಾರೆ. ಆದ್ದರಿಂದ ಭಾರತದಲ್ಲಿ ಕಳೆದ 60 ವರ್ಷಗಳಿಂದ ಉಂಟಾಗಿರುವ ಕೊಳೆಯನ್ನು ತೊಳೆಯುತ್ತೇವೆ ಎಂದು ಹೇಳಿರುವುದು ಭಾರತದ ಬಗೆಗಿನ ಗೌರವವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ನೆಹರಯಿಂದ ಅಟಲ್ ಬಿಹಾರಿ ವಾಜಪೇಯಿ ವರೆಗೂ ಭಾರತದ ಎಲ್ಲಾ ಪ್ರಧಾನಿಗಳಿಗೂ ಅಪಮಾನ ಮಾಡಿದಂತಾಗುತ್ತದೆ ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯಲ್ಲಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆನಂದ್ ಶರ್ಮಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಸ್ಕ್ಯಾಮ್ ಇಂಡಿಯಾ' ಹಣೆಪಟ್ಟಿಯನ್ನು ಕಳಚಿ 'ಸ್ಕಿಲ್ ಇಂಡಿಯಾ' ಮಾಡುವೆ ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಯುಪಿಎ ಸರ್ಕಾರದಲ್ಲಿ ಹಗರಣಗಳು ನಡೆದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅರುಣ್ ಜೇಟ್ಲಿ ಹೇಳಿಕೆಗೆ ಮತ್ತಷ್ಟು ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು, ಜೇಟ್ಲಿ ಪ್ರಶ್ನೆಗೆ ಉತ್ತರಿಸುವ ಬದಲು ಗದ್ದಲ ಉಂಟು ಮಾಡಿದರು ಪರಿಣಾಮ ರಾಜ್ಯಸಭಾ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.