ಕಠ್ಮಂಡು : ಭೀಕರ ಭೂಕಂಪಕ್ಕೆ ತತ್ತರಿಸಿರುವ ನೇಪಾಳದಲ್ಲಿ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಇತ್ತೀಚಿನ ವರದಿ ಪ್ರಕಾರ 4,352 ಜನರು ಭೂಕಂಪಕ್ಕೆ ಬಲಿಯಾಗಿದ್ದು, ಮೃತರ ಸಂಖ್ಯೆ 6 ಸಾವಿರ ದಾಟುವ ಸಾಧ್ಯತೆ ಇದೆ.
ಸಾವಿನ ಸಂಖ್ಯೆ ಬಗ್ಗೆ ನೇಪಾಳದ ಗೃಹ ಸಚಿವಾಲಯ ಅಧಿಕೃತ ಮಾಹಿತಿ ಬಹಿರಂಗಪಡಿಸಿದ್ದು, ಈ ಮಾಹಿತಿ ಪ್ರಕಾರ 4,352 ಜನರು ಮೃತಪಟ್ಟಿದ್ದಾರೆ. ನೇಪಾಳಕ್ಕೆ ಭಾರತ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಸ್ಪಂಧಿಸುತ್ತಿದೆ. ಆಪರೇಷನ್ ಮೈತ್ರಿ ಹೆಸರಿನಲ್ಲಿ ಭಾರತೀಯ ಸೇನೆ ಈ ವರೆಗೂ ನೇಪಾಳದಲ್ಲಿ 5400 ಜನರನ್ನು ರಕ್ಷಿಸಿದೆ.
ಇದೇ ವೇಳೆ ಪರಿಹಾರ ಕಾರ್ಯಾಚರಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪರಿಶೀಲನಾ ಸಭೆ ಕರೆದಿದ್ದಾರೆ. ನೇಪಾಳ ಹಾಗೂ ಭಾರತದಲ್ಲಿ ಸಂಭವಿಸಿರುವ ಭೂಕಂಪದಿಂದ ಸಂತ್ರಸ್ತರಾಗಿರುವವರಿಗೆ ಸೂಕ್ತ ಪರಿಹಾರ ದೊರೆತಿದೆಯೇ ಇಲ್ಲವೇ ಎಂಬುದರ ಬಗ್ಗೆ ಮೋದಿ ಅವರ ರೇಸ್ ಕೋರ್ಸ್ ನಿವಾಸದಲ್ಲಿ ಸಭೆ ನಡೆಯುತಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಿರಿಯ ಸಚಿವರು ಭಾಗವಹಿಸಿದ್ದಾರೆ.
ಭೂಕಂಪಕ್ಕೆ ಸಿಲುಕಿ ನಲುಗಿರುವ ನೇಪಾಳಕ್ಕೆ ಧೈರ್ಯ ತುಂಬಿರುವ ಪ್ರಧಾನಿ ನರೇಂದ್ರ ಮೋದಿ ನಿಮ್ಮೊಂದಿಗೆ ನಾವಿದ್ದೇವೆ ಹೆದರಬೇಡಿ ಎಂದು ಅಭಯ ನೀಡಿದ್ದಾರೆ. ಭಾರತದಿಂದ ನೇಪಾಳದಲ್ಲಿ ಶಿಬಿರಗಳನ್ನು ಸ್ಥಾಪಿಸಲಾಗಿದ್ದು ನಿರಾಶ್ರಿತರಿಗೆ ಆಶ್ರಯ, ಚಿಕಿತ್ಸೆ ನೀಡಲಾಗುತ್ತಿದೆ. ಸೇನಾವಿಮಾನಗಳು ಈಗಾಗಲೇ ಟನ್ ಗಟ್ಟಲೆ ಆಹಾರ ಸಾಮಗ್ರಿಗಳನ್ನು ಹೊತ್ತೊಯ್ದಿವೆ. ಭಾರತೀಯ ಸೇನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್.ಎಸ್.ಎಸ್)ದ ಕಾರ್ಯಕರ್ತರು, ಬಾಬಾ ರಾಮ್ ದೇವ್ ನೇತೃತ್ವದ ಸಂಘಟನೆಯ ಕಾರ್ಯಕರ್ತರು ಸಾಥ್ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.