ಬೆಂಗಳೂರು : ಭೀಕರ ಭೂಕಂಪಕ್ಕೆ ತುತ್ತಾಗಿರುವ ನೇಪಾಳಕ್ಕೆ ಕರ್ನಾಟಕ ಸರ್ಕಾರವೂ ಸಹಾಯ ನೀಡಲು ಮುಂದಾಗಿದೆ. ಔಷಧಗಳು ಹಾಗೂ ಜೀವ ರಕ್ಷಕ ಸಾಮಗ್ರಿಗಳನ್ನು ಹೊತ್ತ ರಾಜ್ಯದ ಹತ್ತು ಸದಸ್ಯರ ವೈದ್ಯರ ತಂಡವು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಯ ಮಾರ್ಗವಾಗಿ ಭೂಕಂಪ ಪೀಡಿತ ನೇಪಾಳಕ್ಕೆ ತೆರಳಿದೆ.
ಭೂಕಂಪ ಪೀಡಿತ ರಾಷ್ಟ್ರದಲ್ಲಿನ ಸಂತ್ರಸ್ತ ಜನತೆಗೆ ವೈದ್ಯಕೀಯ ಚಿಕಿತ್ಸೆ ನೀಡಲು ತೆರಳಿದ ಈ ವೈದ್ಯರ ತಂಡ ಬೆಂಗಳೂರಿನ ಜಯಮಹಲ್ ನಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಅವರ ಅಧಿಕೃತ ನಿವಾಸದಿಂದ ನೇಪಾಳಕ್ಕೆ ತೆರಳಿತು.
ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಯು. ಟಿ. ಖಾದರ್, ನೇಪಾಳದ ಕಠ್ಮಂಡುವಿನಲ್ಲಿ ಸ್ಥಾಪಿಸಿರುವ ವೈದ್ಯರ ಶಿಬಿರಕ್ಕೆ ಆಗಮಿಸುವ ಕನ್ನಡಿಗರಿಗೆ ಮಾತ್ರವಲ್ಲದೆ, ನೇಪಾಳೀಯರು, ವಿದೇಶಿಯರು ಅಥವಾ ಯಾರಿಗೇ ಆಗಲಿ ಅತ್ಯಂತ ಆತ್ಮೀಯತೆಯಿಂದ ಚಿಕಿತ್ಸೆ ನೀಡಿ, ಎಂದು ಸೂಚನೆ ನೀಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಮತ್ತು ಹಿರಿಯ ಅಧಿಕಾರಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್. ಆರ್. ವಿಶು ಕುಮಾರ್ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.
ಔಷಧ ತಜ್ಞರಾದ ಡಾ.ಶ್ರೀನಿವಾಸ್, ಕೆ. ಸಿ. ಜನರಲ್ ಆಸ್ಪತ್ರೆಯ ಡಾ.ಮಂಜುನಾಥ್, ಜಯನಗರ ಸಾರ್ವಜನಿಕ ಆಸ್ಪತ್ರೆಯ ಡಾ.ರಾಜೇಶ್ ಮತ್ತು ಡಾ.ಕಿರಣ್ ಕುಮಾರ್, ಕೋನೇನ ಅಗ್ರಹಾರದ ಪ್ರಾಧಮಿಕ ಆರೋಗ್ಯ ಕೇಂದ್ರದ ಡಾ.ಆಶಾ ಹಾಗೂ ಗಾಣಿಗರಪೇಟೆ ಪ್ರಾಧಮಿಕ ಆರೋಗ್ಯ ಕೇಂದ್ರದ ಡಾ.ಜಯಂತಿ ಅವರು ಇಂದು ಪ್ರಯಾಣ ಬೆಳೆಸಿದ ರಾಜ್ಯ ಸರ್ಕಾರದ ವೈದ್ಯರಾಗಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷರಾದ ಡಾ ಹೊನ್ನೇಗೌಡ, ಉಪಾಧ್ಯಕ್ಷರಾದ ಡಾ ವಾಣಿಕೋರಿ, ಸದಸ್ಯರಾದ ಡಾ ನಿರ್ಮಲ ಮತ್ತು ಡಾ ನಾಗೇಶ್ ಅವರೂ ರಾಜ್ಯ ವೈದ್ಯಕೀಯ ತಂಡದ ಇತರೆ ಸದಸ್ಯರಾಗಿದ್ದಾರೆ.