ಕಠ್ಮಂಡು : 'ಸೋಷಿಯಲ್ ಮೀಡಿಯಾ' ಹಾಗೂ ಸೆಲ್ಫಿಗಳ ಭರಾಟೆಯಲ್ಲಿ ಮನುಷ್ಯ ತನ್ನ ಮಾನವಿಯ ಸಂವೇದನೆಗಳನ್ನೇ ಕಳೆದುಕೊಳ್ಳುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಯಾರಾದರೂ ಅಪಘಾತಕ್ಕೆ ಸಿಲುಕಿಕೊಂಡರೆ ಸ್ಥಳದಲ್ಲೇ ಇರುವ ಜನರು ಅವರಿಗೆ ಸಹಾಯ ಮಾಡುವುದು ಬಿಟ್ಟು ಮೊಬೈಲ್ ನಲ್ಲಿ ವಿಡಿಯೋ, ಫೋಟೊ ತೆಗೆಯಲು ಮುಂದಾಗುತ್ತಾರೆ.
ಇಂತಹದ್ದೇ ಘಟನೆ ಭೂಕಂಪ ಪೀಡಿತ ಪ್ರದೇಶ ನೇಪಾಳದಲ್ಲೂ ನಡೆಯುತ್ತಿದೆ. ಭೂಕಂಪಕ್ಕೆ ಸಿಲುಕಿ ಜನರು ಸಂಕಷ್ಟ ಎದುರಿಸುತ್ತಿದ್ದರೆ, ಕೆಲವೊಂದಷ್ಟು ಮಂದಿ, ಅವಶೇಷಗಳ ಹಿಂದೆ ನಿಂತು ಸೆಲ್ಫಿ ಕ್ಲಿಕ್ಕಿಸುವ ಮೂಲಕ ಮಾನವೀಯ ಸಂವೇದನೆಗಳನ್ನೇ ಮರೆಯುತ್ತಿದ್ದಾರೆ.
ಕಠ್ಮಂಡು ಬಳಿ ಇರುವ ಖ್ಯಾತ ಧರಹರ ಟವರ್ ನೆಲಕ್ಕುರುಳಿದ್ದರೆ, ಭೂಕಂಪದಿಂದ ಪಾರಾದ ಅನೇಕರು ಧರಾಶಾಹಿಯಾಗಿರುವ ಧರಹರ ಟವರ್ ಮುಂದೆ ನಿಂತು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. 1800ರಲ್ಲಿ ನೇಪಾಳದ ರಾಜರು ಧರಹರ ಟವರ್ ನ್ನು ಕಟ್ಟಿಸಿದ್ದರು. ಇದು ಅಮೂಲ್ಯ ಸ್ಮಾರಕಗಳಲ್ಲಿ ಪ್ರಮುಖವಾಗಿತ್ತು.
ಧರಹರ ಟವರ್ ನಲ್ಲಿದ್ದ ಜನರ ಸಾವಿನ ಸಂಖ್ಯೆ ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಅದೆಷ್ಟೋ ಮಂದಿ ಧರಹರ ಟವರ್ ಅವಶೇಷಗಳ ಕೆಳಗೆ ಮೃತಪಟ್ಟಿದ್ದಾರೆ. ಇನ್ನೂ ಹಲವರನ್ನು ರಕ್ಷಣೆ ಮಾಡುವ ಕಾರ್ಯಾಚರಣೆ ಮುಂದುವರೆದಿದೆ. ಆದರೆ ಕೆಲವರಿಗೆ ಮಾತ್ರ ಸೆಲ್ಫಿ ತೆಗೆದುಕೊಳ್ಳುವ ಆತುರತೆ ಕಾಣುತ್ತಿದೆ.